ರಾಯಚೂರು: ಸತತ ಮಳೆಯಿಂದಾಗಿ ಜಲದಿಗ್ಬಂಧನಕ್ಕೊಳಗಾಗಿದ್ದ ರಾಯಚೂರಿನ ಉಸುಕಿನ ಆಂಜನೇಯನಿಗೆ ಕೊನೆಗೂ ಮುಕ್ತಿ ಸಿಕ್ಕಿದೆ.
ಇಲ್ಲಿನ ಮುಳ್ಳಕುಂಟೆ ಕೆರೆ ನೀರಿನಿಂದ ಸಂಪೂರ್ಣ ಜಲಾವೃತವಾಗಿದ್ದ ಉಸುಕಿನ ಆಂಜನೇಯ ದೇವಾಲಯದಲ್ಲಿ ಕಳೆದ ಒಂದು ವಾರದಿಂದ ಪೂಜಾ ಕೈಂಕರ್ಯಗಳನ್ನ ನಿಲ್ಲಿಸಲಾಗಿತ್ತು. ಪಬ್ಲಿಕ್ ಟಿವಿ ವರದಿಯಿಂದ ಎಚ್ಚೆತ್ತ ರಾಯಚೂರು ನಗರಸಭೆ ಕೊನೆಗೆ ದೇವಾಲಯದಲ್ಲಿನ ನೀರು ಹೊರಹೋಗಲು ವ್ಯವಸ್ಥೆ ಮಾಡಿದೆ. ದೊಡ್ಡ ಪೈಪ್ ಅಳವಡಿಸಿ ನೀರನ್ನು ಹೊರ ಬಿಡಲಾಗುತ್ತಿದೆ.
ಸತತ ಮಳೆಗೆ ಮುಳ್ಳಕುಂಟೆ ಕೆರೆ ತುಂಬಿ ಹರಿದು ದೇವಸ್ಥಾನಕ್ಕೆ ನೀರು ನುಗ್ಗಿತ್ತು. ರಸ್ತೆ ಸಹ ಹಾಳಾಗಿ ಭಕ್ತರು ದೇವರ ದರ್ಶನದಿಂದ ದೂರ ಉಳಿದಿದ್ದರು. ಈಗ ನಗರಸಭೆ ನೀರು ತೆರವುಗೊಳಿಸಿ ಭಕ್ತರಿಗೆ ಅನುಕೂಲ ಮಾಡಲು ಮುಂದಾಗಿದೆ.
ದೇವಾಲಯ ಪಕ್ಕದ 4 ಎಕರೆ ಭತ್ತ ಹಾಗೂ ಎರಡು ಎಕರೆಯ ಹೂವಿನ ತೋಟ ಸಂಪೂರ್ಣ ಹಾಳಾಗಿದ್ದು, ಲಕ್ಷಾಂತರ ರೂಪಾಯಿ ಬೆಳೆ ಹಾನಿಯಾಗಿದೆ. ಕೂಡಲೇ ಕಂದಾಯ ಇಲಾಖೆ ಪರಿಶೀಲನೆ ನಡೆಸಿ ಪರಿಹಾರ ಕಾರ್ಯಕ್ಕೆ ಮುಂದಾಗಬೇಕು ಅಂತ ರೈತರು ಒತ್ತಾಯಿಸಿದ್ದಾರೆ.