ಬೆಂಗಳೂರು: ಬಾದಾಮಿಯಲ್ಲಿ ಸ್ಪರ್ಧಿಸಲು ಮುಂದಾಗುತ್ತಿರುವ ಸಿಎಂ ಸಿದ್ದರಾಮಯ್ಯನವರನ್ನು ಸೋಲಿಸಲೇಬೇಕೆಂದು ಹಠಕ್ಕೆ ಬಿದ್ದಿರುವ ಬಿಜೆಪಿ ನಾಯಕರು ಒಮ್ಮತದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ನಿರ್ಧರಿಸಿದ್ದಾರೆ.
ಹೌದು. ರಾಜ್ಯ ಪ್ರವಾಸದಲ್ಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಗುರುವಾರ ಬಾದಾಮಿಯಲ್ಲಿ ಯಾರನ್ನು ಕಣಕ್ಕೆ ಇಳಿಸಬೇಕು ಎನ್ನುವ ಬಗ್ಗೆ ಚರ್ಚೆ ನಡೆಸಿದ್ದಾರೆ. ಈ ಗಂಭೀರ ಚರ್ಚೆಯಲ್ಲಿ ಒಮ್ಮತದ ಅಭ್ಯರ್ಥಿ ಆಯ್ಕೆ ಮಾಡಿ, ಬಂಡಾಯ ಇರಬಾರದು ಎಂದು ಸೂಚನೆ ನೀಡಿದ್ದಾರೆ.
ಈ ಬಾರಿ ಶತಾಯುಗತಾಯವಾದರೂ ಬಾದಾಮಿಯಲ್ಲಿ ಬಿಜೆಪಿ ಗೆಲ್ಲಲೇಬೇಕು ಎಂದು ಅಮಿತ್ ಶಾ ಹೇಳಿದ ಹಿನ್ನೆಲೆಯಲ್ಲಿ ಓರ್ವ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ಸಿದ್ಧತೆ ನಡೆದಿದೆ.
ಯಾರು ಅಭ್ಯರ್ಥಿ?
ಕಳೆದ ಬಾರಿ ಜೆಡಿಎಸ್ನಿಂದ ಸ್ಪರ್ಧೆ ಮಾಡಿದ್ದ ಮಹಾಂತೇಶ್ ಗುರುಪಾದಪ್ಪ ಮಮದಾಪುರ ಅವರನ್ನು ಸಿಎಂ ವಿರುದ್ಧ ಕಣಕ್ಕೆ ಇಳಿಸಲು ಬಿಜೆಪಿ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ. 2013ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಎಂ.ಕೆ.ಪಟ್ಟಣಶೆಟ್ಟಿ ಕಣಕ್ಕೆ ಇಳಿದಿದ್ದರು. ಆದರೆ ಈ ಬಾರಿ ಅವರಿಗೆ ಟಿಕೆಟ್ ನೀಡದೇ ಇರಲು ಬಿಜೆಪಿ ನಿರ್ಧಾರ ಮಾಡಿದೆ.
ಮಮದಾಪುರ, ಎಂ.ಕೆ.ಪಟ್ಟಣಶೆಟ್ಟಿ ಇಬ್ಬರು ಸಂಬಂಧಿಗಳಾಗಿದ್ದು ಮಾವ, ಅಳಿಯನ ಸಂಬಂಧವಿದೆ. ಹೀಗಾಗಿ ಅಂತಿಮವಾಗಿ ಮಾವನನ್ನ ಮನವೊಲಿಸುವ ಕಾರ್ಯವನ್ನು ಅಳಿಯನಿಗೆ ಬಿಟ್ಟಿದ್ದಾರೆ. ಅಮಿತ್ ಶಾ ಜೊತೆಗಿನ ಸಭೆಯಲ್ಲಿ ಅಭ್ಯರ್ಥಿ ಕ್ಲಿಯರ್ ಆಗಿದ್ದು, ದೆಹಲಿಯಲ್ಲಿ ಭಾನುವಾರ ನಡೆಯಲಿರುವ ಸಭೆಯ ಬಳಿಕ ಅಧಿಕೃತವಾಗಿ ಪ್ರಕಟವಾಗಲಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ಬಾರಿ ಜೆಡಿಎಸ್ನಿಂದ ಸ್ಪರ್ಧಿಸಿದ್ದ ಮಮಾದಪುರ 42,333 ಮತ ಪಡೆದಿದ್ದರೆ, ಬಿಬಿ ಚಿಮ್ಮನ್ನಕಟ್ಟಿ 57446 ಮತಗಳನ್ನು ಪಡೆದಿದ್ದರು.