ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕ್ಷೇತ್ರ ಪುನರ್ವಿಂಗಡಣೆ ಆಯೋಗವು ಗುರುವಾರ ಭಾರತದ ಚುನಾವಣಾ ಆಯೋಗಕ್ಕೆ ಅಂತಿಮ ಆದೇಶವನ್ನು ಸಲ್ಲಿಸಿದೆ.
ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ ನೇತೃತ್ವದ ಆಯೋಗವು ಜಮ್ಮು ಮತ್ತು ಕಾಶ್ಮೀರದ ಕ್ಷೇತ್ರ ಪುನರ್ವಿಂಗಡಣೆ ಆದೇಶವನ್ನು ಅಂತಿಮಗೊಳಿಸಲು ಇಂದು ಸಭೆ ನಡೆಸಿತು. ಇದಕ್ಕೆ ಸಂಬಂಧಿಸಿದ ಗೆಜೆಟ್ ಅಧಿಸೂಚನೆ ಕೂಡ ಪ್ರಕಟವಾಗಿದ್ದು, ಕೇಂದ್ರ ಸರ್ಕಾರ ಪ್ರಕಟಿಸಿದ ದಿನಾಂಕದಿಂದ ಈ ಆದೇಶ ಜಾರಿಗೆ ಬರಲಿದೆ. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಬ್ರಾಹ್ಮಣರನ್ನು ಸಿಎಂ ಆಗಿ ನೋಡಲು ಬಯಸುತ್ತೇನೆ: ರಾವ್ಸಾಹೇಬ್ ಪಾಟೀಲ್ ದಾನ್ವೆ
ಕೇಂದ್ರಾಡಳಿತ ಪ್ರದೇಶವಾದ ಜಮ್ಮು-ಕಾಶ್ಮೀರದಲ್ಲಿದ್ದ 90 ವಿಧಾನಸಭಾ ಕ್ಷೇತ್ರಗಳ ಪೈಕಿ 43 ಜಮ್ಮು ಪ್ರದೇಶದ ಭಾಗವಾಗಿ ಮತ್ತು 47 ಕಾಶ್ಮೀರ ಪ್ರದೇಶದ ಭಾಗವಾಗಲಿದೆ ಎಂದು ಅಂತಿಮ ಆದೇಶದಲ್ಲಿ ತಿಳಿಸಲಾಗಿದೆ. ಈವರೆಗೆ ಕಾಶ್ಮೀರದಲ್ಲಿ 46 ಕ್ಷೇತ್ರಗಳಿದ್ದವು. ಜಮ್ಮುವಿನಲ್ಲಿ 37 ಸ್ಥಾನಗಳಿದ್ದವು.
ಮೊದಲ ಬಾರಿಗೆ ಒಂಬತ್ತು ಸ್ಥಾನಗಳನ್ನು ಪರಿಶಿಷ್ಟ ಪಂಗಡಗಳಿಗೆ (ಎಸ್ಟಿ) ಮೀಸಲಿಡಲಾಗಿದೆ. ಜಮ್ಮು ಪ್ರದೇಶದಲ್ಲಿ 6 ಮತ್ತು ಕಾಶ್ಮೀರ ಕಣಿವೆಯಲ್ಲಿ 3. ಅಂತೆಯೇ 7 ಸ್ಥಾನಗಳನ್ನು ಪರಿಶಿಷ್ಟ ಜಾತಿಗೆ (ಎಸ್ಸಿ) ಮೀಸಲಿಡಲಾಗಿದೆ. ಈ ಹಿಂದಿನ ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆಯಲ್ಲಿ ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿ ಕಲ್ಪಿಸಲು ಸಂವಿಧಾನದಲ್ಲಿ ಅವಕಾಶ ಇರಲಿಲ್ಲ. ಇದನ್ನೂ ಓದಿ: ಡ್ರೋನ್ ಮುಖಾಂತರ ಶಸ್ತ್ರಾಸ್ತ್ರಗಳನ್ನು ಪಡೆದ 4 ಖಲಿಸ್ತಾನಿ ಭಯೋತ್ಪಾದಕರ ಬಂಧನ
ಎಲ್ಲಾ ಐದು ಸಂಸದೀಯ ಕ್ಷೇತ್ರಗಳು ಮೊದಲ ಬಾರಿಗೆ ಸಮಾನ ಸಂಖ್ಯೆಯ ವಿಧಾನಸಭಾ ಸ್ಥಾನಗಳನ್ನು ಹೊಂದಿವೆ. ಕ್ಷೇತ್ರ ಮರುವಿಂಗಡಣೆ ಉದ್ದೇಶಕ್ಕಾಗಿ ಜಮ್ಮು ಮತ್ತು ಕಾಶ್ಮೀರವನ್ನು ಒಂದೇ ಘಟಕವಾಗಿ ಪರಿಗಣಿಸಲಾಗಿದೆ. ಜಮ್ಮುವಿನ ರಜೌರಿ, ದೋಡಾ, ಉಧಂಪುರ್, ಕಿಶ್ತ್ವಾರ, ಕಥುವಾ ಮತ್ತು ಸಾಂಬಾ ಜಿಲ್ಲೆಗಳಲ್ಲಿ ಒಟ್ಟು 6 ವಿಧಾನಸಭಾ ಕ್ಷೇತ್ರಗಳನ್ನು ಹಾಗೂ ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಒಂದು ಕ್ಷೇತ್ರವನ್ನು ಹೊಸದಾಗಿ ಸೃಷ್ಟಿಸಲಾಗಿದೆ.