ಮಂಡ್ಯ: ಲೋಕಸಭಾ ಉಪಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಜೊತೆಗೂಡಿ ಕೆಲಸ ಮಾಡುವುದಿಲ್ಲವೆಂದು ಜೆಡಿಎಸ್ ನ ಸ್ಥಳೀಯ ನಾಯಕರು ಸಭೆಯಲ್ಲಿ ಕಿತ್ತಾಡಿಕೊಂಡಿದ್ದಾರೆ.
ಸೋಮವಾರ ನಡೆಯುವ ಜೆಡಿಎಸ್ ಕಾರ್ಯಕರ್ತರ ಪೂರ್ವಭಾವಿ ಸಭೆಯ ಬಗ್ಗೆ ಚರ್ಚಿಸಲು ಶಾಸಕ ಸುರೇಶ್ ಗೌಡ ನೇತೃತ್ವದಲ್ಲಿ ನಾಗಮಂಲದಲ್ಲಿ ಸಭೆಯನ್ನು ಕರೆಯಲಾಗಿತ್ತು. ಸಭೆಯಲ್ಲಿ ಕಾರ್ಯಕರ್ತರು ಕಾಂಗ್ರೆಸ್ ಕಾರ್ಯಕರ್ತರ ಜೊತೆ ಕೆಲಸ ಮಾಡುವ ಬಗ್ಗೆ ಅಸಮಾಧಾನ ಹೊರಹಾಕಿದ್ದಲ್ಲದೇ, ಕಾರ್ಯಕರ್ತರು ಹಾಗೂ ಮುಖಂಡರ ನಡುವೆಯೇ ವಾಗ್ವಾದ ನಡೆದಿದೆ ಎನ್ನುವ ಮಾಹಿತಿ ಲಭಿಸಿವೆ.
ಈ ವೇಳೆ ಕಾರ್ಯಕರ್ತರು, ಎಲ್ಲವನ್ನು ನೀವೇ ತೀರ್ಮಾನ ಮಾಡುವುದಾದರೇ, ನಾವು ಏತಕ್ಕೆ ಬೇಕು. ಚುನಾವಣೆ ಕಾರ್ಯಕ್ರಮಗಳನ್ನು ನಿರ್ಧರಿಸುವ ಬಗ್ಗೆ ನೀವು ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ವಿರುದ್ಧ ಕೆಲಸ ಮಾಡಿದ್ದ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಲ್.ರಾಜೇಶ್ ಇಂದು ಮುಂಚೂಣಿಯಲ್ಲಿದ್ದಾರೆ. ಅಲ್ಲದೇ ಎಲ್.ಆರ್.ಶಿವರಾಮೇಗೌಡರ ಕಟ್ಟಾ ಬೆಂಬಲಿಗನಾಗಿರುವ ಅವರು ಇಂದು ಮುಂಚೂಣಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ಸಿನ ರಾಜೇಶ್ ಬಗ್ಗೆ ಮಾತನಾಡುತ್ತಿದ್ದಂತೆ ಸಭೆಯಲ್ಲಿ ಮುಖಂಡರ ಜೊತೆ ಕಾರ್ಯಕರ್ತರು ವಾಕ್ಸಮರವೇ ಏರ್ಪಟ್ಟಿತ್ತು. ಇದೇ ವೇಳೆ ಕೆಲವು ಕಾರ್ಯಕರ್ತರು ಜೆಡಿಎಸ್ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳು ಒಟ್ಟಾಗಿ ಚುನಾವಣೆಯನ್ನು ಎದುರಿಸಲು ಮಾತನಾಡಿದರು. ತಮ್ಮ ವಿರುದ್ಧವೇ ಕೆಲಸ ಮಾಡಿದ್ದ ಕಾಂಗ್ರೆಸ್ಸಿನವರು ಇಂದು ಮುಂಚೂಣಿಯಲ್ಲಿರುವುದಕ್ಕೆ ಕೆಲವರಿಂದ ತೀವ್ರ ವಿರೋಧ ಏರ್ಪಟ್ಟಿತ್ತು.
ಇದೇ ವೇಳೆ ಮಧ್ಯಪ್ರವೇಶಿಸಿದ ಶಾಸಕ ಸುರೇಶ್ ಗೌಡ, ಅಂತಿಮವಾಗಿ ಶಿವರಾಮೇಗೌಡರಿಗೆ ಟಿಕೆಟ್ ಸಿಗಲು ನಾನೇ ಕಾರಣ. ಚೆನ್ನಾಗಿ ಕೆಲಸ ಮಾಡಿ ಅವರನ್ನು ಗೆಲ್ಲಿಸೋಣ. ಎಲ್ಲರೂ ಸಮಾಧಾನವಾಗಿರುವಂತೆ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv