ಮಂಗಳೂರು: ಪುಣ್ಯಕ್ಷೇತ್ರ ಧರ್ಮಸ್ಥಳದಲ್ಲಿ ನೂಕುನುಗ್ಗಲು ಉಂಟಾಗಿದ್ದು, ಭಕ್ತರು ಮತ್ತು ಭದ್ರತಾ ಸಿಬ್ಬಂದಿ ಹೊಡೆದಾಡಿದ ಘಟನೆ ಕಳೆದ ಎರಡು ದಿನಗಳ ಹಿಂದೆ ನಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಭಕ್ತರ ದಟ್ಟಣೆ ಹೆಚ್ಚಿರುವಾಗ ದೇವರ ದರ್ಶನಕ್ಕೆ ಸರತಿ ಸಾಲಿನಲ್ಲಿ ಹೋಗಬೇಕಾಗುತ್ತದೆ. ದೇವಸ್ಥಾನದ ಬಲ ಬದಿಯಿಂದ ಆರಂಭಿಸಿ ಒಂದು ಸುತ್ತು ಸಾಲು ಇರುತ್ತದೆ. ಈ ಸರತಿ ಸಾಲಿನ ಮಧ್ಯೆ ಮಾತಿಗೆ ಮಾತು ಬೆಳೆದು ಭದ್ರತಾ ಸಿಬ್ಬಂದಿ ಹಾಗೂ ಭಕ್ತರು ಹೊಡೆದಾಡಿದ್ದಾರೆ. ಮಹಿಳೆಯರು, ಯುವಕರು ಸೇರಿ ಭದ್ರತಾ ಸಿಬ್ಬಂದಿ ಮೇಲೆ ಕೈ ಮಾಡಿದ್ದಲ್ಲದೇ, ದೇವಸ್ಥಾನ ಎನ್ನುವುದನ್ನು ಲೆಕ್ಕಿಸದೇ ಬೈದಾಡಿಕೊಂಡಿದ್ದರು. ಕೊನೆಗೆ ಹೆಚ್ಚುವರಿ ಭದ್ರತಾ ಸಿಬ್ಬಂದಿ ಮತ್ತು ಧರ್ಮಸ್ಥಳ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ, ಗಲಾಟೆ ನಡೆಸಿದ ಯುವಕನನ್ನು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳವನ್ನು ನೋಡಿ ಕಲಿಯಿರಿ: ಪುರಿ ದೇವಾಲಯಕ್ಕೆ ಸುಪ್ರೀಂ ಸೂಚನೆ
ಎರಡು ದಿನಗಳ ಹಿಂದೆ ನಡೆದಿದ್ದ ಘಟನೆಯನ್ನು ಸಾಲಿನಲ್ಲಿ ನಿಂತಿದ್ದ ಭಕ್ತರು ಮೊಬೈಲಿನಲ್ಲಿ ಸೆರೆಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಭದ್ರತಾ ಸಿಬ್ಬಂದಿ ದರ್ಪದಿಂದಾಗಿ ಘಟನೆ ಸಂಭವಿಸಿದೆ ಎನ್ನುವಂತೆ ಫೇಸ್ ಬುಕ್ನಲ್ಲಿ ಅಪ್ಲೋಡ್ ಮಾಡಲಾಗಿದೆ. ಯುವಕರ ವರ್ತನೆಗೆ ಟೀಕೆ ವ್ಯಕ್ತವಾಗಿದೆ.
https://youtu.be/JZTfaP1hyss