ಹುಬ್ಬಳ್ಳಿ: ಕುಂದಗೋಳ ವಿಧಾನಸಭೆ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಕುಸುಮಾ ಶಿವಳ್ಳಿ ಪರ ಮಾಜಿ ಸಿಎಂ ಸಿದ್ದರಾಮಯ್ಯ ಪ್ರಚಾರದಲ್ಲಿ ತೊಡಗಿದ್ದರು. ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಮೋದಿ ಮೋದಿ ಎಂದು ಘೋಷಣೆ ಕೂಗಿ, ಪ್ರಚಾರಕ್ಕೆ ಅಡ್ಡಿಪಡಿಸಲು ಯತ್ನಿಸಿದ ಘಟನೆ ನಡೆದಿದೆ.
ಕ್ಷೇತ್ರದ ದ್ಯಾವನೂರ ಗ್ರಾಮದಲ್ಲಿ ಪ್ರಚಾರ ನಡೆಸುತ್ತಿದ್ದ ವೇಳೆ ಘಟನೆ ನಡೆದಿದ್ದು, ಇದರಿಂದ ತೀವ್ರ ಮುಜುಗರಕ್ಕೆ ತುತ್ತಾದ ಸಿದ್ದರಾಮಯ್ಯ, ಕೂಡಲೇ ಮೋದಿ ಪರ ಘೋಷಣೆ ಕೂಗುತ್ತಿದ್ದವರನ್ನು ಸ್ಥಳದಿಂದ ಕಳಿಸುವಂತೆ ಪೊಲೀಸರಿಗೆ ಸೂಚನೆ ನೀಡಿದ್ರು. ಇದರಿಂದ ಸಿಟ್ಟಿಗೆದ್ದ ಬಿಜೆಪಿ ಕಾರ್ಯಕರ್ತರು, ಪೊಲೀಸರ ಜೊತೆ ವಾಗ್ವಾದಕ್ಕೆ ಇಳಿದ್ರು. ಇತ್ತ ಕಾಂಗ್ರೆಸ್ ಕಾರ್ಯಕರ್ತರು ಕೂಡ ಸಿಟ್ಟುಗೊಂಡ ಪರ ಒಂದು ಹಂತದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಪರಸ್ಪರ ಕೈ ಮಿಲಾಯಿಸಿದರು.
ಪರಿಸ್ಥಿತಿ ಕೈ ಮೀರುತ್ತಿರುವುದನ್ನು ಅರಿತ ಪೊಲೀಸಲು ಕಾರ್ಯಕರ್ತರನ್ನು ನಿಯಂತ್ರಿಸಲು ಹರಸಾಹಸಪಟ್ಟರು. ಪ್ರಚಾರ ವೇಳೆ ಮಾತನಾಡಿದ ಸಿದ್ದರಾಮಯ್ಯ ಅವರು, ಕುಸುಮಾ ಅವರಿಗೆ ಏನು ತಿಳಿದಿಲ್ಲ ಎನ್ನುತ್ತಾರೆ. ಆದರೆ ಯಾರು ರಾಜಕೀಯ ಕಲಿತು ಬಂದಿಲ್ಲಾ, ಅವರ ಹಿಂದೆ ಸಂಪೂರ್ಣ ಸರ್ಕಾರ ಇದೆ. ಈ ಕ್ಷೇತ್ರವನ್ನು ದತ್ತು ಪಡೆದು ಅಭಿವೃದ್ಧಿ ಮಾಡುತ್ತೇವೆ ಎಂದರು. ಅಲ್ಲದೇ ಮೋದಿ, ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಏನಾದರೂ ಮಾಡಿದ್ದಾರಾ ಎಂದು ಪ್ರಶ್ನಿಸಿ ತಾವು ಸಿಎಂ ಆಗಿದ್ದಾಗ ಜಾರಿ ಮಾಡಿದ್ದ ಜನಪರ ಯೋಜನೆಗಳನ್ನು ಪ್ರಸ್ತಾಪ ಮಾಡಿದರು.
ಇತ್ತ ಇಂದು ಸಂಜೆ ವೇಳೆಗೆ ಕುಂದಗೋಳ ವಿಧಾನಸಭಾ ಕ್ಷೇತ್ರದ ದೇವನೂರು ಗ್ರಾಮದಲ್ಲಿ ನಡೆಯ ಬೇಕಿದ್ದ ಕೆಎಸ್ ಈಶ್ವರಪ್ಪ ಅವರ ರೋಡ್ ಶೋ ಕಾರ್ಯಕ್ರಮವನ್ನು ರದ್ದುಗೊಳಿಸಲಾಯಿತು. ಇದೇ ಗ್ರಾಮದಲ್ಲೇ ಕೈ ಕಾರ್ಯಕರ್ತರು ಹಾಗೂ ಕಮಲ ಕಾರ್ಯಕರ್ತರ ನಡುವೆ ಜಗಳ ನಡೆದಿದ್ದ ಕಾರಣ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಈ ಹಿನ್ನೆಲೆ ಈಶ್ವರಪ್ಪ ಅವರ ರೋಡ್ ಶೋ ರದ್ದು ಮಾಡಲಾಗಿದೆ.