ಧಾರವಾಡ: ಕುಡಿದ ಮತ್ತಿನಲ್ಲಿ ಯುವಕರಿಬ್ಬರ ಮಧ್ಯೆ ನಡೆದ ವಾಗ್ವಾದದ ವೇಳೆ ಒರ್ವ ಗಾಳಿಯಲ್ಲಿ ಗುಂಡು ಹಾರಿದ ಘಟನೆ ಧಾರವಾಡದಲ್ಲಿ ನಡೆದಿದೆ.
ನಗರದ ಹೊರವಲಯದಲ್ಲಿರುವ ಖಾಸಗಿ ರೆಸಾರ್ಟ್ ನಲ್ಲಿ ಈ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿ ಧಾರವಾಡ ವಿದ್ಯಾಗಿರಿ ಪೊಲೀಸರು ಹನುಮಂತಗೌಡ ಹಾಗೂ ರಾಘವೇಂದ್ರ ಎಂಬವರನ್ನ ಬಂಧಿಸಿದ್ದಾರೆ. ರಾತ್ರಿ ಈ ಖಾಸಗಿ ರೆಸಾರ್ಟ್ ನಲ್ಲಿ ಮದುವೆ ಸಮಾರಂಭವೊಂದು ನಡೆದಿತ್ತು.
ಈ ಸ್ಥಳಕ್ಕೆ ಆಗಮಿಸಿದ ಹನುಮಂತಗೌಡ ಹಾಗೂ ರಾಘವೇಂದ್ರನ ನಡುವೆ ಗಲಾಟೆ ಆರಂಭವಾಗಿದೆ. ಈ ವೇಳೆ ಹನುಮಂತಗೌಡ ತನ್ನ ಬಳಿ ಇದ್ದ ರಿವಾಲ್ವರ್ ನಿಂದ ಎರಡು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ಈ ವೇಳೆ ಸ್ಥಳದಲ್ಲಿ ಜನರು ಜಮಾಯಿಸಿದ್ದಾರೆ. ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸರು ಇಬ್ಬರನ್ನ ಬಂಧಿಸಿದ್ದಾರೆ.
ಇನ್ನು ಹನುಮಂತಗೌಡ ಕೊಲೆಯಾದ ಧಾರವಾಡ ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗೆಶ್ ಗೌಡ ಆಪ್ತ ಎಂದು ತಿಳಿದು ಬಂದಿದೆ. ರೆಸಾರ್ಟ್ ನಲ್ಲಿ ನಡೆದಿದ್ದ ಮದುವೆ ಸಮಾರಂಭಕ್ಕೆ ಯೊಗೇಶ್ ಗೌಡ ಕೊಲೆ ಆರೋಪಿ ಬಸವರಾಜ್ ಮುತ್ತಗಿ ಕೂಡಾ ಬಂದಿದ್ದ ಎಂದು ಮಾಹಿತಿ ಇದ್ದು, ಗುಂಡು ಹಾರಿದ್ದಕ್ಕೂ ಈ ಪ್ರಕರಣಕ್ಕೂ ಸಂಬಂಧ ಇದೆಯೇ ಎಂದು ಅನುಮಾನಗಳು ಕೂಡಾ ಆರಂಭವಾಗಿವೆ.
ಸದ್ಯ ವಿದ್ಯಾಗಿರಿ ಪೊಲೀಸರು ಈ ಬಗ್ಗೆ ತನಿಖೆ ಕೈಗೊಂಡಿದ್ದಾರೆ.