ಬಾಗಲಕೋಟೆ: ಹೋಟೆಲ್ನಲ್ಲಿ ಚಹಾ ಕುಡಿಯುವ ವಿಚಾರವಾಗಿ ಎರಡು ಗುಂಪಿನ ಯುವಕರ ಮಧ್ಯೆ ಮಾರಾಮಾರಿ ನಡೆದಿರುವ ಘಟನೆ ಬಾಗಲಕೋಟೆಯ ವಿದ್ಯಾಗಿರಿಯಲ್ಲಿ ನಡೆದಿದೆ.
ಭಾನುವಾರ ಸಂಜೆ ವಿದ್ಯಾಗಿರಿಯ ಅಕ್ಕಿಮರಡಿ ಎಂಬವರ ಪೆಟ್ರೋಲ್ ಬಂಕ್ನಲ್ಲಿ ಈ ಗಲಾಟೆ ನಡೆದಿದೆ. ಮುಚಖಂಡಿ ತಾಂಡ ಹಾಗೂ ಮುರನಾಳ ಗ್ರಾಮದ ಯುವಕರ ಗುಂಪು ಪರಸ್ಪರ ಕೋಲು ಹಾಗೂ ಕೈಯಿಂದ ಬಡಿದಾಡಿಕೊಂಡಿದ್ದಾರೆ. ಯುವಕರು ಬಡಿದಾಟದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಸದ್ಯ ಹೊಡೆದಾಡಿಕೊಂಡ ದೃಶ್ಯ ವೈರಲ್ ಆಗಿದೆ. ಚಹಾ ಕುಡಿಯೋಕೆ ಇದೇ ಹೋಟೆಲ್ಗೆ ಯಾಕೆ ಬಂದ್ರಿ ಎಂದು ಒಂದು ಗುಂಪಿನ ಯುವಕರು ಪ್ರಶ್ನಿಸಿದ್ರೆ, ನಾವ್ ಬರ್ತೀವಿ ಅದನ್ನ ಕೇಳೋಕೆ ನೀವ್ಯಾರು ಎಂದು ಇನ್ನೊಂದು ಗುಂಪಿನ ಯುವಕರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಈ ಜಗಳ ವಿಕೋಪಕ್ಕೆ ತೆರಳಿ ಮಾರಾಮಾರಿಯಾಗಿದೆ.
ಎರಡು ಗುಂಪಿನ ನಡುವೆ ನಡೆದ ಗಲಾಟೆಯಿಂದ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಬಾಗಲಕೋಟೆ ನವನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.