ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ. ಜಯಲಲಿತಾ ಮತ್ತು ದಿ.ಕರುಣಾನಿಧಿ ರಾಜಕೀಯ ಬದ್ಧ ವೈರಿಗಳೇ ಎಂದೇ ಭಾರತದ ರಾಜಕಾರಣದಲ್ಲಿ ಗುರುತಿಸಿಕೊಂಡ ನಾಯಕರು. ಆದರೂ ಇಬ್ಬರಲ್ಲಿಯೂ ಒಂದು ಸಾಮ್ಯತೆ ಮಾತ್ರ ತಮಿಳುಗರ ಮೆಚ್ಚುಗೆಗೆ ಪಾತ್ರವಾಗಿತ್ತು. ನಮ್ಮ ರಾಜಕೀಯ ಧ್ಯೇಯ, ಉದ್ದೇಶ ಏನೇ ಆಗಿರಲಿ ತಮಿಳುನಾಡು ಅಭಿವೃದ್ಧಿಗೆ ಬದ್ಧರಾಗಿರೋಣ ಎಂದು ಮಾತನಾಡಿಕೊಂಡಿದ್ದರು ಎನ್ನಲಾಗಿದೆ.
ಜಯಲಲಿತಾ ಮತ್ತು ಕರುಣಾನಿಧಿ ಇಬ್ಬರೂ ಒಬ್ಬರ ಮೇಲೊಬ್ಬರು ಆರೋಪ, ಪ್ರತ್ಯಾರೋಪಗಳು ಮಾಡುತ್ತಿದ್ದರು. ಆದರೆ ತಮಿಳುನಾಡು ಅಭಿವೃದ್ಧಿಗೆ ಇಬ್ಬರೂ ನಾಯಕರು ಬದ್ಧರಾಗಿದ್ದರು ಎಂಬುದು ಇವರಿಬ್ಬರ ನಡುವಿನ ಒಪ್ಪಂದವಾಗಿತ್ತಂತೆ.
ತಮಿಳುನಾಡು ರಾಜಕೀಯ ರಂಗದಲ್ಲಿ ಮುಳುಗದ ಸೂರ್ಯ ಎಂದೇ ಖ್ಯಾತಿ ಪಡೆದಿದ್ದ ಕಲೈಗ್ನಾರ್ ಕರುಣಾನಿಧಿ ನಿಧನರಾಗಿದ್ದಾರೆ. ಮಾಜಿ ಸಿಎಂ, ದ್ರಾವಿಡ ಚಳವಳಿಯ ನೇತಾರ, 60ಕ್ಕೂ ಹೆಚ್ಚು ವರ್ಷಗಳ ಕಾಲ ರಾಜಕೀಯದಲ್ಲಿ ಸೋಲರಿಯದ ಸರದಾರನಾಗಿ ಮೆರೆದಿದ್ದ ಕರುಣಾನಿಧಿ ಮಂಗಳವಾರ ಸಂಜೆ ವಿಧಿವಶರಾದರು.
ದೇಶದ ವಿಭಿನ್ನ ರಾಜಕಾರಣಗಳ ಸಾಲಿನಲ್ಲಿ ಕರುಣಾನಿಧಿ ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾರೆ. ರಾಜಕಾರಣದ ಈ ಪೆರಿಯಾರ್ ಎದೆಗೂಡಲ್ಲಿ ರಾಜನೀತಿಗಿಂತ ಕವಿ ಹೃದಯದ ಮನಸ್ಸಿದೆ. ಕೈಗಳಲ್ಲಿ ಬರವಣಿಗೆ ಮೂಲಕ ಜನರನ್ನು ಬಡಿದೆಬ್ಬಿಸುವ ತಾಕತ್ತಿದೆ. ಒಂದು ವೇಳೆ, ಕರುಣಾನಿಧಿ ರಾಜಕಾರಣಿ ಆಗಿರದಿದ್ದರೆ, ಒಬ್ಬ ಉತ್ಕೃಷ್ಟ ಬರಹಗಾರನಾಗಿರುತ್ತಿದ್ದರು. ಯಾಕಂದ್ರೆ, ಅವರೊಬ್ಬ ಸರ್ವಶ್ರೇಷ್ಠ ಕತೆಗಾರ.
ಕರುಣಾನಿಧಿ ರಾಜಕೀಯ ಬದುಕಿನ ವರ್ಣರಂಜಿತ ಪುಟಗಳನ್ನು ತೆರೆಯುವ ಮುನ್ನ, ಬಾಲ್ಯದ ಬದುಕಿನ ಕತೆ ತಿಳಿಯದಿದ್ದರೆ, ಈ ಕಥೆ ಅರ್ಥ ಹೀನ. 10ನೇ ತರಗತಿ ಫೇಲ್ ಆಗಿದ್ದ ಕರುಣಾನಿಧಿ ಪೆರಿಯಾರರ ಸ್ವಾಭಿಮಾನಿ ಹೋರಾಟದಲ್ಲಿ ಭಾಗಿಯಾಗಿ ತನ್ನ ಹರಿತವಾದ ಕೈಬರಹದಿಂದಲೇ ಅಪಾರ ಜನಮನ್ನಣೆಗಳಿಸಿದ್ರು. `ತಮಿಳುನಾಡು ತಮಿಳು ಮಾನವರ್ ಮನ್ರಮ್’ ಎಂಬ ವಿದ್ಯಾರ್ಥಿ ಸಂಘ ಕಟ್ಟಿಕೊಂಡು ದ್ರಾವಿಡ ಹೋರಾಟಕ್ಕೆ ಅಡಿಯಿಟ್ಟಿದ್ದರು. ಈ ಮೂಲಕ ಚಿಕ್ಕಂದಿನಿಂದಲೇ ಸಂಘಟನಾ ಚತುರನಾಗಿಯೇ ಗುರುತಿಸಿಕೊಂಡಿದ್ದರು.