ಚಿಕ್ಕಬಳ್ಳಾಪುರ: ಹಾಡಹಗಲೇ ತಾಲೂಕು ಕಚೇರಿಯಲ್ಲಿ ದುಷ್ಕರ್ಮಿಗಳು ರೌಡಿಶೀಟರ್ ಒಬ್ಬನ ಮೇಲೆ ಲಾಂಗ್ನಿಂದ ದಾಳಿ ಮಾಡಿದ್ದು, ಅದೃಷ್ಟವಶಾತ್ ತಪ್ಪಿಸಿಕೊಂಡು ಬದುಕುಳಿದ ಘಟನೆ ಗೌರಿಬಿದನೂರುನಲ್ಲಿ ನಡೆದಿದೆ.
ರೌಡಿಶೀಟರ್ ಗಿರೀಶ್ ಮೇಲೆ ಗೌರಿಬಿದನೂರಿನ ನಾಗರೆಡ್ಡಿ ಬಡವಾಣೆ ಮೈಲಾರಿ ಹಾಗೂ ಆತನ ಸಹಚರರು ಲಾಂಗ್, ಮಚ್ಚುಗಳಿಂದ ದಾಳಿ ಮಾಡಿದ್ದಾರೆ. ತನ್ನ ಗುರಿ ತಪ್ಪುತ್ತಿದ್ದಂತೆ ಮೈಲಾರಿ ಅಲ್ಲಿಂದ ಪರಾರಿಯಾಗಿದ್ದಾನೆ.
ಆಗಿದ್ದೇನು?:
ವಿಜಯಕುಮಾರ್ ಎಂಬವರು ತಮ್ಮ ಜಮೀನು ಮಾರಾಟಕ್ಕೆ ಮುಂದಾಗಿದ್ದರು. ಆದರೆ ಇದಕ್ಕೆ ಅವರ ಮಗ ವಿರೋಧ ವ್ಯಕ್ತಪಡಿಸಿದ್ದರು. ಇದನ್ನು ಲೆಕ್ಕಿಸಿದ ಅವರು ಇಂದು ತಹಶೀಲ್ದಾರ್ ಕಚೇರಿಯಲ್ಲಿ ಜಮೀನನ್ನು ಬಾಬು ಎಂಬವರಿಗೆ ಮಾರುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ವಿಜಯಕುಮಾರ್ ಅವರ ಮಗ ಹಾಗೂ ಗಿರೀಶ್ ಜಮೀನು ಮಾರುವುದಕ್ಕೆ ಅಡ್ಡಿ ಮಾಡಿದ್ದಾರೆ. ಬಾಬು ಜೊತೆಗೆ ಬಂದಿದ್ದ ಮೈಲಾರಿ ಹಾಗೂ ಆತನ ಸಹಚರರು ಗಿರೀಶ್ಗೆ ಎಚ್ಚರಿಕೆ ನೀಡಿದ್ದಾರೆ. ಇದಕ್ಕೆ ಬಗ್ಗದಿದ್ದಾಗ ಲಾಂಗ್ ಹಾಗೂ ಮಚ್ಚು ಹಿಡಿದು, ದಾಳಿಗೆ ಮಾಡಿದ್ದಾರೆ. ಅವರಿಂದ ತಪ್ಪಿಸಿಕೊಳ್ಳಲು ಗಿರೀಶ್ ತಕ್ಷಣವೇ ತಹಶೀಲ್ದಾರ್ ಕೊಠಡಿಗೆ ನುಗ್ಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಘಟನೆಯಿಂದ ಎಚ್ಚೆತ್ತುಕೊಂಡ ತಹಶೀಲ್ದಾರ್ ಶ್ರೀನಿವಾಸ್ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬರುತ್ತಿದ್ದಂತೆ ಮೈಲಾರಿ ಹಾಗೂ ಆತನ ಸಹಚರರು ಅಲ್ಲಿಂದ ಪರಾರಿಯಾಗಿದ್ದಾರೆ. ಇತ್ತ ಕಚೇರಿಯಲ್ಲಿ ಜೀವ ಭಯದಿಂದ ಬಚ್ಚಿಕೊಂಡಿದ್ದ ಗಿರೀಶ್ನನ್ನು ವಶಕ್ಕೆ ಪಡೆದ ಪೊಲೀಸರು, ವಿಚಾರಣೆಗೆ ಒಳಪಡಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv