ಮುಂಬೈ: ಮುಂಬೈನ ಬಾಂದ್ರಾ ಟರ್ಮಿನಸ್ನಲ್ಲಿಂದು (Bandra Terminus) ಭಾರಿ ಕಾಲ್ತುಳಿತ (Stampede) ಸಂಭವಿಸಿ, 10 ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ ಇಬ್ಬರ ಸ್ಥಿತಿ ಗಂಭಿರವಾಗಿದೆ ಎಂದು ವರದಿಯಾಗಿದೆ.
ಪ್ರಯಾಣಿಕರ ಓಡಾಟದ ವೇಳೆ ಗೋರಖ್ಪುರಕ್ಕೆ ತೆರಳುತ್ತಿದ್ದ ಬಾಂದ್ರಾ-ಗೋರಖ್ಪುರ ಅಂತ್ಯೋದಯ ಎಕ್ಸ್ಪ್ರೆಸ್ (Bandra-Gorakhpur Antyodaya Express) ರೈಲು ಹತ್ತಲು ಜನ ಏಕಾಏಕಿ ಮುಗಿಬಿದ್ದಾಗ ಘಟನೆ ಸಂಭವಿಸಿದೆ ಎಂದು ಸ್ಥಳೀಯ ಪೊಲೀಸ್ ಹಾಗೂ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಭಾನುವಾರ ಮುಂಜಾನೆ 2:45ರ ಸುಮಾರಿಗೆ ಘಟನೆ ನಡೆದಿದ್ದು, ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗಿದೆ. ಈ ಬೆನ್ನಲ್ಲೇ ರೈಲು ನಿಲ್ದಾಣದ ಅವ್ಯವಸ್ಥೆ ವಿರುದ್ಧ ಜನ ಆಕ್ರೋಶ ಹೊರಹಾಕಿದ್ದಾರೆ.
ರೈಲ್ವೆ ರಕ್ಷಣಾ ಪಡೆ (ಆರ್ಪಿಎಫ್) ಸಿಬ್ಬಂದಿ ಮತ್ತು ಸ್ಥಳೀಯ ಪ್ರಯಾಣಿಕರು ಗಾಯಾಳುಗಳನ್ನ ತಕ್ಷಣವೇ ಭಾಭಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದನ್ನೂ ಓದಿ: Lucknow | 10 ಹೋಟೆಲ್ಗಳಿಗೆ ಬಾಂಬ್ ಬೆದರಿಕೆ – 46 ಲಕ್ಷಕ್ಕೆ ಬೇಡಿಕೆ
ಮುಂಬರುವ ದೀಪಾವಳಿ ಮತ್ತು ಪ್ರಸಿದ್ಧ ಛಾತ್ ಹಬ್ಬದ ಹಿನ್ನೆಲೆ ಜನ ತಮ್ಮ ಊರುಗಳಿಗೆ ತೆರಳುತ್ತಿದ್ದರು. ಬಾಂದ್ರಾ ಟರ್ಮಿನಸ್ನಲ್ಲಿ ತಮ್ಮ ಊರುಗಳಿಗೆ ತೆರಳಲು ಜನ ಕಿಕ್ಕಿರಿದಿದ್ದರು. ರೈಲು ಪ್ಲಾಟ್ಫಾರ್ಮ್ಗೆ ಬರುತ್ತಿದ್ದಂತೆ ಸೀಟು ಕಾಯ್ದಿರಿಸಿದ್ದ ಪ್ರಯಾಣಿಕರು ರೈಲು ಹತ್ತಲು ಮುಂದಾದರು, ಇದೇ ವೇಳೆ ಪ್ಲಾಟ್ಫಾರಂನಲ್ಲಿದ್ದ ಎಲ್ಲ ಪ್ರಯಾಣಿಕರು ಸೀಟು ಹಿಡಿದುಕೊಳ್ಳಲು ಆತುರದಲ್ಲಿ ರೈಲು ಹತ್ತಲು ಮುಗಿಬಿದ್ದರು. ಈ ವೇಳೆ ಕಾಲ್ತುಳಿತ ಸಂಭವಿಸಿದೆ ಎಂದು ವರದಿಗಳು ತಿಳಿಸಿವೆ.
22 ಬೋಗಿಗಳನ್ನು ಹೊಂದಿರುವ ಬಾಂದ್ರಾ-ಗೋರಖ್ಪುರ ಅಂತ್ಯೋದಯ ಎಕ್ಸ್ಪ್ರೆಸ್ ರೈಲು ಭಾನುವಾರ ಮುಂಜಾನೆ 2:45ರಕ್ಕೆ ನಿಲ್ದಾಣಕ್ಕೆ ಬಂದಿತ್ತು. ಮುಂಜಾನೆ 5.10ಕ್ಕೆ ಗೋರಖ್ಪುರಕ್ಕೆ ಹೊರಡಬೇಕಿತ್ತು. ಇದನ್ನೂ ಓದಿ: ಆದಷ್ಟು ಬೇಗ ದರ್ಶನ್ ಬಿಡುಗಡೆಯಾಗಲಿ: ಹಾಸನಾಂಬೆ ಸನ್ನಿಧಿಯಲ್ಲಿ ತರುಣ್ ಸುಧೀರ್ ಮಾತು