ಪಾಟ್ನಾ: ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಬಿಹಾರದ ಮುಖ್ಯಮಂತ್ರಿ ಹಾಗೂ ಜೆಡಿಯು ನಾಯಕ ನಿತೀಶ್ ಕುಮಾರ್ ಅವರು ಮಹಿಳೆಯರಿಗೆ ವಿಚಿತ್ರ ಸಲಹೆ ನೀಡಿ ಭಾರೀ ಚರ್ಚೆಗೆ ಕಾರಣವಾಗಿದ್ದಾರೆ.
ಬಿಹಾರದ ಮಧುಬಾನಿಯಲ್ಲಿ ಬುಧವಾರ ನಡೆದ ಪ್ರಚಾರದ ವೇಳೆ ಮಾತನಾಡಿದ ಅವರು, ಪತಿ ಹಾಗೂ ಮನೆಯಲ್ಲಿರುವ ಪುರುಷರು ನೀವು ಹೇಳಿದ ಪಕ್ಷಕ್ಕೆ ವೋಟ್ ಹಾಕಿದರೇ ಮಾತ್ರ ಅಡುಗೆ ಮಾಡಿ ಪ್ರೀತಿಯಿಂದ ಬಡಿಸಿ. ಒಂದು ವೇಳೆ ಅವರು ನಿಮ್ಮ ಮಾತು ಮೀರಿ ಬೇರೆ ಪಕ್ಷಕ್ಕೆ ಮತಹಾಕಿದರೆ ಅವರನ್ನ ಒಂದು ದಿನ ಉಪವಾಸವಿಡಿ ಎಂದು ಸಮಾವೇಶದಲ್ಲಿ ಸೇರಿದ್ದ ಮಹಿಳೆಯರಿಗೆ ತಿಳಿಸಿದ್ದಾರೆ.
ನಿತೀಶ್ ಕುಮಾರ್ ಅವರು ಬಿಜೆಪಿಯ ಹಾಲಿ ಸಂಸದ ಹುಕುಮ್ದೇವ್ ನಾರಾಯಣ ಅವರ ಪುತ್ರ, ಮಧುಬಾನಿ ಲೋಕಸಭಾ ಕ್ಷೇತ್ರದ ಎನ್ಡಿಎ ಅಭ್ಯರ್ಥಿ ಅಶೋಕ್ ಯಾದವ್ ಪರ ನಿನ್ನೆ ಭರ್ಜರಿ ಪ್ರಚಾರ ಮಾಡಿದರು. ಈ ಮೂಲಕ ಅಶೋಕ್ ಯಾದವ್ ಅವರಿಗೆ ಮತ ಹಾಕುವಂತೆ ಮಹಿಳೆಯರಿಗೆ ಮನವಿ ಮಾಡಿಕೊಂಡಿದ್ದಾರೆ.
ಜೆಡಿಯು ಬಿಜೆಪಿ ನೇತೃತ್ವದ ಎನ್ಡಿಎ ಭಾಗವಾಗಿದೆ. ಮಹಿಳೆಯರಿಗೆ ಅವಕಾಶ ನೀಡುವ ಉದ್ದೇಶದಿಂದ ಕವಿತಾ ಸಿಂಗ್ ಅವರಿಗೆ ಬಿಹಾರದ ಸಿವನ್ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡಲಾಗಿದೆ. ರಮಾ ದೇವಿ ಅವರು ಶೋಹರ್ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದಾರೆ. ಲೋಕ ಜನಶಕ್ತಿ ಪಾರ್ಟಿ (ಎಲ್ಜೆಪಿ) ವೀಣಾ ಸಿಂಗ್ ಅವರು ವೈಶಾಲಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದಾರೆ.