ಬೆಂಗಳೂರು: ಕರ್ನಾಟಕ ಬಂದ್ಗೆ ನಮ್ಮ ಸಂಪೂರ್ಣ ಬೆಂಬಲವಿದ್ದು, ಓಲಾ ಉಬರ್ ಆಟೋ ಹಾಗೂ ಟ್ಯಾಕ್ಸಿಗಳು ಅಂದು ಬಂದ್ ಆಗಲಿದೆ ಎಂದು ಓಲಾ, ಉಬರ್ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ತನ್ವೀರ್ ಪಾಷಾ ಹೇಳಿದ್ದಾರೆ.
ಕರ್ನಾಟಕದಲ್ಲಿ ಕನ್ನಡಿಗರ ಉದ್ಯೋಗಕ್ಕಾಗಿ ಸರೋಜಿನಿ ಮಹಿಷಿ ವರದಿ ಅನುಷ್ಠಾನಕ್ಕೆ ಒತ್ತಾಯಿಸಿ ಕನ್ನಡ ಪರ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆ ಫೆಬ್ರವರಿ 13ಕ್ಕೆ 100ನೇ ದಿನಕ್ಕೆ ಕಾಲಿಡಲಿದೆ. ಹಾಗಾಗಿ ಫೆಬ್ರವರಿ 13ಕ್ಕೆ ಕನ್ನಡಪರ ಎಲ್ಲಾ ಸಂಘಟನೆಗಳು ಕರ್ನಾಟಕ ಬಂದ್ಗೆ ಕರೆ ನೀಡಿವೆ. ಈ ಬಂದ್ಗೆ ನಮ್ಮ ಬೆಂಬಲವು ಇದೆ ಎಂದು ಪಾಷಾ ತಿಳಿಸಿದ್ದಾರೆ.
ಕನ್ನಡ ಪರ ಸಂಘಟನೆಯ ಒಕ್ಕೂಟದ ಅಧ್ಯಕ್ಷ ಚಳುವಳಿ ನಾಗೇಶ್ ನಮ್ಮನ್ನು ಭೇಟಿ ಮಾಡಿ ಹೋರಾಟದ ವಾಸ್ತವಾಂಶ ತಿಳಿಸಿ ಬಂದ್ಗೆ ಬೆಂಬಲಿಸಲು ಮನವಿ ಮಾಡಿದ್ದರು. ಹಾಗಾಗಿ ಈ ಹೋರಾಟ ನಮಗೆ ಅತ್ಯವಶ್ಯಕ ಎಂದು ತಿಳಿದು ಆ ದಿನ ನಾವು ನಮ್ಮ ಓಲಾ, ಉಬರ್ ಚಾಲಕರ ಸಂಘದ ಪದಾಧಿಕಾರಿಗಳೊಂದಿಗೆ ಮತ್ತು ಆದರ್ಶ ಆಟೋ ಯೂನಿಯನ್ ಮಂಜುನಾಥ್, ಪೀಸ್ ಆಟೋ ಯೂನಿಯನ್ ರಘು ನಾರಾಯಣ್, ಜೈ ಭಾರತ ಚಾಲಕರ ಸಂಘದ ಚಂದ್ರ ಕುಮಾರ್, ಜೈ ಕ.ರ.ವೇ ಚಾಲಕ ಘಟಕದ ಬಾಬು, ಸಾರಥಿ ಸೇನೆ ಶಬರಿನಾಥ್ ಹಾಗೂ ಇನ್ನಿತರೆ ಆಟೋ ಮತ್ತು ಟ್ಯಾಕ್ಸಿ ಸಂಘಟನೆಯ ಮುಖಂಡರ ಜೊತೆ ಸಭೆ ನೆಡೆಸಿ ಫೆಬ್ರವರಿ 13ರ ಕರ್ನಾಟಕ ಬಂದ್ಗೆ ನಮ್ಮ ಸಂಪೂರ್ಣ ಬೆಂಬಲ ನೀಡಲು ನಿರ್ಧರಿಸಿದ್ದೇವೆ ಎಂದು ಅವರು ಹೇಳಿದ್ದಾರೆ.
ಹೀಗಾಗಿ ನಮ್ಮ ಸೇವೆಗಳು ಫೆಬ್ರವರಿ 13ರ ಬೆಳಗ್ಗೆ 6 ಘಂಟೆಯಿಂದ ಸಂಜೆ 6 ಘಂಟೆಯವರೆಗೆ ಇರುವುದಿಲ್ಲ ಎಂದು ತನ್ವೀರ್ ಪಾಷಾ ಅವರು ತಿಳಿಸಿದ್ದಾರೆ.
ಏನಿದು ಸರೋಜಿನಿ ಮಹಿಷಿ ವರದಿ?
1983ರಲ್ಲಿ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದ ವೇಳೆ ಕನ್ನಡಿಗರಿಗೆ ಕರ್ನಾಟಕದಲ್ಲಿ ಪರಭಾಷಿಕರಿಂದ ಅನ್ಯಾಯವಾಗುತ್ತಿದೆ ಎಂಬ ಕೂಗು ಎದ್ದಿತ್ತು. ಆಗ ಕರ್ನಾಟಕದಲ್ಲಿ ಕನ್ನಡಿಗರಿಗೆ ದೊರೆಯುತ್ತಿದ್ದ ಉದ್ಯೋಗಾವಕಾಶಗಳನ್ನು ಪರಿಶೀಲಿಸಿ ವಿಮರ್ಶಿಸಲು ಶ್ರೀಮತಿ ಸರೋಜಿನಿ ಮಹಿಷಿಯವರಿಗೆ ಕೇಳಿಕೊಂಡಿತ್ತು. ಮಹಿಷಿಯವರು ನೀಡಿದ ವರದಿಯು ಸರೋಜಿನಿ ಮಹಿಷಿ ವರದಿ ಎಂದೇ ಖ್ಯಾತವಾಗಿದ್ದು, ಕರ್ನಾಟಕದಲ್ಲಿ ನ್ಯಾಯವಾಗಿ ಕನ್ನಡಿಗರಿಗೆ ಉದ್ಯೋಗಾವಕಾಶಗಳು ದೊರೆಯಬೇಕೆಂಬುದ್ದನ್ನು ಈ ವರದಿ ಪ್ರತಿಪಾದಿಸುತ್ತೆ. ಈ ವರದಿ ಇಂದಿಗೂ ಕನ್ನಡ ಮತ್ತು ಕರ್ನಾಟಕ ಪರ ಹೋರಾಟಗಳಿಗೆ ಆಧಾರವಾಗಿದೆ.
1986ರಲ್ಲೇ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ಕನ್ನಡಿಗರಿಗೆ ಮೊದಲು ಉದ್ಯೋಗ ಅವಕಾಶ ಕಲ್ಪಿಸಿಕೊಡಬೇಕು ಎಂದು ವರದಿಯಲ್ಲಿತ್ತು. ಐಟಿ, ಬಿಟಿ ಸೇರಿದಂತೆ ರಾಜ್ಯದ ಎಲ್ಲಾ ಖಾಸಗಿ ಉದ್ಯಮಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಜಾರಿ, ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಮೊದಲ ಆದ್ಯತೆ ನೀಡುವುದೂ ಸೇರಿ 14 ಪ್ರಮುಖ ಶಿಫಾರಸುಗಳನ್ನು ಒಳಗೊಂಡಿದೆ. ಅದರಲ್ಲಿ ಕನ್ನಡಿಗರಿಗೆ ಎಲ್ಲಿಲ್ಲಿ ಎಷ್ಟೆಷ್ಟು ಪ್ರಮಾಣದಲ್ಲಿ ಉದ್ಯೋಗಾವಕಾಶ ಇರಬೇಕೆಂದು ಈ ವರದಿಯಲ್ಲಿ ಶಿಫಾರಸು ಮಾಡಲಾಗಿತ್ತು.