ಜಾಮೀನು ಸಿಕ್ಕರೂ 5,500 ಕ್ರಿಮಿನಲ್‍ಗಳು ಯುಪಿ ಜೈಲಿನಿಂದ ಹೊರಬರುತ್ತಿಲ್ಲ!

Public TV
2 Min Read
CRIMINAL

ಆಗ್ರಾ: ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಅಂದ್ರೆ 10 ತಿಂಗಳಲ್ಲಿ ಜೈಲುಪಾಲಾದ ಸುಮಾರು 5,500 ಕ್ರಿಮಿನಲ್ ಗಳಿಗೆ ಜಾಮೀನು ಸಿಕ್ಕರೂ ಹೊರಬರಲು ಹಿಂಜರಿಯುತ್ತಾರೆ ಎಂಬ ಅಚ್ಚರಿಯ ಅಂಶವೊಂದನ್ನು ಅಲ್ಲಿನ ಡಿಜಿಪಿ ಓಂಪ್ರಕಾಶ್ ಸಿಂಗ್ ಬಹಿರಂಗಪಡಿಸಿದ್ದಾರೆ.

ಅಪರಾಧ ಕೃತ್ಯಗಳ ಪರಾಮರ್ಶನಾ ಸಭೆಯಲ್ಲಿ ಭಾಗವಹಿಸಿದ್ದ ಅವರು ಈ ಮಾಹಿತಿಯನ್ನು ನೀಡಿದ್ದಾರೆ. ಪೊಲೀಸರ ವಿಶೇಷ ಕಾರ್ಯಾಚಣೆ ಪಡೆ(ಎಸ್‍ಟಿಎಫ್)ಯ ಕಠಿಣ ಪರಿಶ್ರಮದಿಂದಾಗಿ ರಾಜ್ಯದಲ್ಲಿ ಅಪರಾಧ ಸಂಖ್ಯೆಗಳ ಪ್ರಮಾಣ ಕುಗ್ಗಿಸುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದ್ದಾರೆ.

2017ರ ಮಾರ್ಚ್‍ನಿಂದ 2018ರ ಜನವರಿ ವರೆಗಿನ 10 ತಿಂಗಳ ಅವಧಿಯಲ್ಲಿ, ರಾಜ್ಯದ ಪೊಲೀಸರು 1,331 ಎನ್ ಕೌಂಟರ್‍ಗಳನ್ನು ನಡೆಸಿದ್ದಾರೆ. ಈ ಎನ್‍ಕೌಂಟರ್ ಮೂಲಕ 3,091 ಕ್ರಿಮಿನಲ್ ಗಳನ್ನು ಬಂಧಿಸಿದ್ದರೆ, ಗುಂಡೇಟಿಗೆ 43 ಮಂದಿ ಬಲಿಯಾಗಿದ್ದಾರೆ. ಇದನ್ನೂ ಓದಿ: ನನ್ನ ಅರೆಸ್ಟ್ ಮಾಡಿ, ಎನ್‍ಕೌಂಟರ್ ನಲ್ಲಿ ಸಾಯಲು ಇಷ್ಟವಿಲ್ಲ- ಯುಪಿ ಪೊಲೀಸರಿಗೆ ಕೊಲೆ ಆರೋಪಿ ಶರಣು

download

ಎನ್‍ಕೌಂಟರ್ ಬಲಿಯಾದವರು ಮತ್ತು ಬಂಧನಕ್ಕೆ ಒಳಗಾದ 50% ರಷ್ಟು ಕ್ರಿಮಿನಲ್ ಗಳ ತಲೆಗೆ ಬಹುಮಾನ ಘೋಷಿಸಲಾಗಿತ್ತು. ಇದರಲ್ಲಿ ಹಲವರು ಹೆಚ್ಚು ಸಮಯ ತಲೆಮರೆಸಿಕೊಂಡಿದ್ದರು. ಬಳಿಕ ಎನ್‍ಕೌಂಟರ್ ಭೀತಿಯಿಂದ ಕಳೆದ 10 ತಿಂಗಳಲ್ಲಿ 5,409 ಕ್ರಿಮಿನಲ್‍ಗಳು ತಮಗೆ ದೊರೆತ ಜಾಮೀನು ರದ್ದುಪಡಿಸಿ ಕೋರ್ಟಿಗೆ ಶರಣಾಗಿದ್ದಾರೆ ಅಂತ ಅವರು ವಿವರಿಸಿದರು.

2013ರಿಂದ ಪ್ರತೀವರ್ಷ ಹೋಳಿ ವೇಳೆ ಸುಮಾರು 60 ಗಲಭೆಗಳು ನಡೆಯುತ್ತಿದ್ದವು. ಆದರೆ ಈ ಬಾರಿ ಹೋಳಿಯಂದು ಸುಮಾರು 14 ಗುಂಪು ಘರ್ಷಣೆ ಪ್ರಕರಣಗಳು ನಡೆದಿದ್ದು, ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆ ಆಗುತ್ತಿದೆ ಎಂದು ಅವರು ವಿವರಿಸಿದ್ರು.

ಇದೇ ವೇಳೆ ಮಹಿಳೆಯರ ಮೇಲಿನ ಅಪರಾಧ ಪ್ರಕರಣದ ಕುರಿತು ಮಾಹಿತಿ ನೀಡಿದ ಅವರು, ರಾಜ್ಯದಲ್ಲಿ ಒಟ್ಟು 3,400 ಪ್ರಕರಣಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕ ಪ್ರದೇಶಗಳಲ್ಲಿ ಮಹಿಳೆಯರಿಗೆ ಚುಡಾಯಿಸುವಿಕೆ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣಗಳು ನಡೆಯದಂತೆ ಆ್ಯಂಟಿ ರೋಮಿಯೋ ಪಡೆಯನ್ನು ನಿಯೋಜಿಸಲಾಗಿದ್ದು, ಇದರ ಸಕ್ರೀಯ ಕಾರ್ಯಚರಣೆಯಿಂದ 10 ತಿಂಗಳಲ್ಲಿ ಸುಮಾರು 26 ಲಕ್ಷಕ್ಕೂ ಅಧಿಕ ಜನರಿಗೆ ಎಚ್ಚರಿಕೆ ನೀಡಿದೆ. ಇಷ್ಟು ಮಾತ್ರವಲ್ಲದೇ ಮಹಿಳೆಯರ ಸುರಕ್ಷತೆಗಾಗಿ ರಾಜ್ಯ ಪೊಲೀಸ್ ಇಲಾಖೆಯ ತುರ್ತು ಸೇವಾ ಘಟಕ (ಯುಪಿ 100) ಆರಂಭಿಸಿದ್ದು, ಮಹತ್ವದ ಪಾತ್ರವಹಿಸಿದೆ ಎಂದು ಡಿಜಿಪಿ ವಿವರಿಸಿದ್ದಾರೆ.

shamli surrender

ಗ್ಯಾಂಗ್‍ಸ್ಟರ್ ಮತ್ತು ಸಮಾಜ ವಿರೋಧಿ ಚಟುವಟಿಕೆಗಳ ನಿಗ್ರಹ ಕಾಯ್ದೆಯಡಿ ಈವರೆಗೆ ಸುಮಾರು 13,624 ಕೇಸುಗಳನ್ನು ದಾಖಲಿಸಿಕೊಳ್ಳಲಾಗಿದೆ. ಇದರಲ್ಲಿ 12,600 ಕೇಸ್ ಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೇ ಸುಮಾರು 94 ಕೋಟಿ ರೂ. ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ವಾಹನ ಕಳವು ಪ್ರಕರಣದಲ್ಲೂ ಗಣನೀಯವಾಗಿ ಇಳಿಕೆಯಾಗಿದ್ದು, ಸುಮಾರು 7,000 ದ್ವಿಚಕ್ರ ಹಾಗೂ 900 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂಬುದಾಗಿ ಅವರು ಮಾಹಿತಿ ನೀಡಿದ್ದಾರೆ.

ರೌಡಿಗಳ ಕಾಟ ಜಾಸ್ತಿಯಾಗಿದ್ದ ಹಿನ್ನೆಲೆಯಲ್ಲಿ ಯೋಗಿ ಅದಿತ್ಯನಾಥ್ ಅವರು ಪೊಲೀಸರಿಗೆ, ಪಿಸ್ತೂಲ್ ಪಾಕೆಟ್ ನಲ್ಲಿ ಇಡಲು ಕೊಟ್ಟಿರುವುದಲ್ಲ. ಗೂಂಡಾಗಳನ್ನು ಎನ್‍ಕೌಂಟರ್ ಮಾಡಲು ಕೊಡಲಾಗಿದೆ. ಹೀಗಾಗಿ ನಿಮಗೆ ಕೊಟ್ಟಿರುವ ಅಧಿಕಾರವನ್ನು ಚಲಾಯಿಸಿ ರೌಡಿಗಳನ್ನು ಮಟ್ಟ ಹಾಕಿ ಎಂದು ಸೂಚಿಸಿದ್ದರು.

Share This Article