ಚೆನ್ನೈ: ತಮಿಳುನಾಡಿನ ಕೊಯಮತ್ತೂರಿನ ತಂದೆಯೊಬ್ಬರು ಗೋಡೆ ಕುಸಿದು ಮೃತಪಟ್ಟ ಇಬ್ಬರು ಮಕ್ಕಳ ಕಣ್ಣುಗಳನ್ನು ದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಸೆಲ್ವರಾಜ್ ಅವರು ಟೀ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸೆಲ್ವರಾಜ್ ಅವರಿಗೆ 15 ವರ್ಷದ ರಾಮನಾಥನ್ ಹಾಗೂ 18 ವರ್ಷದ ನಿವೇದಾ ಮಕ್ಕಳಿದ್ದರು. ಗೋಡೆ ಕುಸಿದು ಇಬ್ಬರು ಮೃತಪಟ್ಟ ಕಾರಣ ಸೆಲ್ವರಾಜ್ ಅವರ ಕಣ್ಣುಗಳನ್ನು ದಾನ ಮಾಡಲು ನಿರ್ಧರಿಸಿದ್ದರು. ಇದನ್ನೂ ಓದಿ: ತಮಿಳುನಾಡಿನಲ್ಲಿ ಭಾರೀ ಮಳೆಗೆ 17 ಮಂದಿ ಬಲಿ
ತಮಿಳುನಾಡಿನಲ್ಲಿ ಭಾರೀ ಮಳೆಯಿಂದಾಗಿ ಹಲವು ಪ್ರದೇಶಗಳಲ್ಲಿ ನಡೆದ ಅನೇಕ ಘಟನೆಯಲ್ಲಿ 25 ಮಂದಿ ಮೃತಪಟ್ಟಿದ್ದಾರೆ. ಇದರಲ್ಲಿ 17 ಮಂದಿ ಕೊಯಮತ್ತೂರಿನಲ್ಲಿ ಗೋಡೆ ಕುಸಿದು ಮೃತಪಟ್ಟಿದ್ದಾರೆ. ಇಬ್ಬರು ಮಕ್ಕಳು ತಮ್ಮ ಚಿಕ್ಕಮ್ಮನ ಮನೆಯಲ್ಲಿ ಮಲಗಿದ್ದಾಗ ಗೋಡೆ ಕುಸಿದಿದೆ. ಪರಿಣಾಮ ಇಬ್ಬರು ಮೃತಪಟ್ಟಿದ್ದಾರೆ.
ನನ್ನ ಮಕ್ಕಳ ಮೃತದೇಹ ಮಣ್ಣಿನಲ್ಲಿ ಸೇರುತ್ತದೆ ಅಥವಾ ಸುಟ್ಟು ಹೋಗುತ್ತದೆ. ಆದರೆ ಅವರ ಕಣ್ಣುಗಳು ಇಬ್ಬರಿಗೆ ಉಪಯೋಗವಾಗುತ್ತದೆ. ಇದು ಒಳ್ಳೆಯ ಕೆಲಸ ಅಲ್ಲವೇ ಎಂದು ಪ್ರಶ್ನಿಸುವ ಮೂಲಕ ಸೆಲ್ವರಾಜ್ ಅವರು ಪ್ರತಿಕ್ರಿಯಿಸಿದ್ದಾರೆ.
ಕೆಲವು ವರ್ಷಗಳ ಹಿಂದೆ ಸೆಲ್ವರಾಜ್ ಅವರ ಪತ್ನಿ ಲಕ್ಷ್ಮಿ ನಿಧನರಾಗಿದ್ದರು. ಆಗ ಸೆಲ್ವರಾಜ್ ಅವರೊಬ್ಬರೇ ತಮ್ಮ ಇಬ್ಬರು ಮಕ್ಕಳನ್ನು ನೋಡಿಕೊಳ್ಳುತ್ತಿದ್ದರು. ನಿವೇದಾ ಬಿ.ಕಾಂ ಓದುತ್ತಿದ್ದರೆ, ರಾಮ್ನಾಥ್ 10ನೇ ತರಗತಿ ಓದುತ್ತಿದ್ದನು.
ನನ್ನ ಮಗಳು ವಿದ್ಯಾಭ್ಯಾಸ ಮಾಡಿ ಪೊಲೀಸ್ ಅಧಿಕಾರಿ ಆಗಬೇಕು ಎಂದು ಕನಸು ಕಂಡಿದ್ದಳು. ಆಕೆ ಓದಿನಲ್ಲಿ ತುಂಬಾ ಮುಂದಿದ್ದಳು. ನನ್ನ ಮಕ್ಕಳ ಕಣ್ಣುಗಳು ಜಗತ್ತಿನ ಬೇರೆ ವ್ಯಕ್ತಿಗಳಿಗೆ ಬೆಳಗಾಗಿರುವುದು ನನಗೆ ತುಂಬಾ ಖುಷಿಯಿದೆ ಎಂದು ಹೇಳುವ ಮೂಲಕ ಸೆಲ್ವರಾಜ್ ಭಾವುಕರಾಗಿದ್ದರು.