ಲಕ್ನೋ: ಯುವಕನೊಬ್ಬ ಅನ್ಯ ಸಮುದಾಯದವರೊಂದಿಗೆ (Another Community) ಸ್ನೇಹ ಬೆಳೆಸಿದ್ದ ಎಂಬ ಕಾರಣಕ್ಕೆ ಆತನ ತಂದೆಯನ್ನು (Father) ಮನಬಂದಂತೆ ಥಳಿಸಿ ನೆರೆಹೊರೆಯವರೇ ಹತ್ಯೆ (Murder) ಮಾಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ (Uttar Pradesh) ನಡೆದಿದೆ. ದಾಳಿಯಲ್ಲಿ ಸಾವನ್ನಪ್ಪಿದ ವ್ಯಕ್ತಿಯ ಪುತ್ರನೂ (Son) ಗಾಯಗೊಂಡಿದ್ದಾನೆ ಎಂದು ವರದಿಗಳು ತಿಳಿಸಿವೆ.
ಮೃತ ವ್ಯಕ್ತಿಯ ಮಗ ಶಾರುಖ್ ಶೇಖ್ (20) ಅನ್ಯ ಸಮುದಾಯದ ಸ್ನೇಹಿತರೊಂದಿಗೆ ಮಾತನಾಡಿದ ಎಂಬ ಕಾರಣಕ್ಕೆ ನೆರೆಹೊರೆಯವರು ಥಳಿಸಿದ್ದಾರೆ. ತನ್ನ ಮಗನನ್ನು ಥಳಿಸುತ್ತಿರುವುದನ್ನು ಕಂಡು ಮಹಮ್ಮದ್ ಸರ್ತಾಜ್ ಆತನನ್ನು ರಕ್ಷಿಸಲು ಧಾವಿಸಿದ್ದಾರೆ. ಆದರೆ ಈ ವೇಳೆ ನೆರೆಹೊರೆಯವರು ಸರ್ತಾಜ್ ಮೇಲೂ ಹಲ್ಲೆ ನಡೆಸಿದ್ದಾರೆ. ಇದರಿಂದ ಸರ್ತಾಜ್ ಪ್ರಜ್ಞೆ ಕಳೆದುಕೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ವರದಿಗಳ ಪ್ರಕಾರ ಶಾರುಖ್ ತನ್ನ ಇಬ್ಬರು ಸ್ನೇಹಿತರೊಂದಿಗೆ ತಮ್ಮ ಮನೆಯ ಹೊರಗಡೆ ಮಾತನಾಡುತ್ತಿದ್ದ. ಈ ವೇಳೆ ನೆರೆಹೊರೆಯವರಾದ ರಶೀದ್ ಖಾನ್, ಅಶು ಖಾನ್, ಫಯ್ಯಾಮ್ ಹಾಗೂ ಫಾಜಿಲ್ ಆತನನ್ನು ನಿಂದಿಸಿ ಥಳಿಸಿದ್ದಾರೆ. ಈ ವೇಳೆ ಆತನ ಸ್ನೇಹಿತರು ಹೇಗೋ ಅಲ್ಲಿಂದ ತಪ್ಪಿಸಿಕೊಂಡಿದ್ದಾರೆ. ಆದರೆ ಶಾರುಖ್ನನ್ನು ಥಳಿಸುತ್ತಿದ್ದುದನ್ನು ಕಂಡ ಸರ್ತಾಜ್ ಮಗನನ್ನು ರಕ್ಷಿಸಲು ಅಲ್ಲಿಗೆ ಬಂದಾಗ ಅವರ ಮೇಲೆ ಹಾಕಿ ಸ್ಟಿಕ್ಗಳಿಂದ ಥಳಿಸಿದ್ದಾರೆ. ಇದನ್ನೂ ಓದಿ: ವಂದೇ ಭಾರತ್ ಎಕ್ಸ್ಪ್ರೆಸ್ ಉದ್ಘಾಟನೆಗೊಂಡ 4ನೇ ದಿನಕ್ಕೆ ಕಲ್ಲು ತೂರಾಟ- ಕಿಟಕಿ ಗಾಜು ಪುಡಿ ಪುಡಿ
ನನ್ನ ಕುಟುಂಬ ಅನ್ಯ ಸಮುದಾಯದವರ ಭೇಟಿಗೆ ಯಾವುದೇ ಆಕ್ಷೇಪ ವ್ಯಕ್ತಪಡಿಸಿಲ್ಲ. ಆದರೆ ನಮ್ಮ ನೆರೆಹೊರೆಯವರು ಇದನ್ನು ವಿರೋಧಿಸಿದ್ದು, ಅನ್ಯ ಧರ್ಮದವರೊಂದಿಗೆ ಸಂಬಂಧ ಕಡಿದುಕೊಳ್ಳುವಂತೆ ಹೇಳಿದ್ದರು. ಇಲ್ಲದೇ ಹೋದರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆಯನ್ನೂ ಹಾಕಿದ್ದರು. ಘಟನೆಗೆ ಸಂಬಂಧಿಸಿದಂತೆ ಎಲ್ಲಾ ಆರೋಪಿಗಳ ವಿರುದ್ಧವೂ ಕಠಿಣ ಕ್ರಮವನ್ನು ಕೈಗೊಳ್ಳಬೇಕಾಗಿ ವಿನಂತಿಸುತ್ತೇವೆ ಎಂದು ಶಾರುಖ್ನ ಹಿರಿಯ ಸಹೋದರ ದಾವುದ್ ತಿಳಿಸಿದ್ದಾರೆ.
ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ. ಇದನ್ನೂ ಓದಿ: ಒಡಿಶಾದಲ್ಲಿ ಮತ್ತೊಬ್ಬ ರಷ್ಯಾ ವ್ಯಕ್ತಿಯ ಶವ ಪತ್ತೆ – 15 ದಿನದಲ್ಲಿ 3ನೇ ಘಟನೆ