ಕೊಪ್ಪಳ: ಪ್ರೀತಿಸಿ ಮದುವೆಯಾಗಿರುವ ಜೋಡಿಗೆ ಯುವತಿಯ ಪೋಷಕರು ಆಕೆಯನ್ನು ಬಲವಂತವಾಗಿ ಕರೆದುಕೊಂಡು ಹೋಗಲು ಯತ್ನಿಸಿ ವಿಫಲವಾದ ಘಟನೆ ಜಿಲ್ಲೆಯ ಗಂಗಾವತಿ ತಾಲೂಕಿನ ಪ್ರಗತಿ ನಗರದಲ್ಲಿ ನಡೆದಿದೆ. ಘಟನೆ ಹಿನ್ನೆಲೆಯಲ್ಲಿ ಪ್ರೇಮ ವಿವಾಹವಾಗಿರುವ ಜೋಡಿಯು ರಕ್ಷಣೆ ಕೋರಿ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಗೆ ದೌಡಾಯಿಸಿದ್ದಾರೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಪ್ರಗತಿ ನಗರದ ರಮೇಶ್ ಹಾಗೂ ಹಾಸನ ಮೂಲದ ರೇಖಾ ಈ ಹಿಂದೆ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾಗ ಪ್ರೇಮಾಂಕುರವಾಗಿ ಕಳೆದ 8 ತಿಂಗಳ ಹಿಂದೆ ಇಬ್ಬರು ಮದುವೆಯಾಗಿದ್ದಾರೆ. ಈ ಮದುವೆಗೆ ರೇಖಾಳ ಮನೆಯವರು ಒಪ್ಪಿಗೆ ನೀಡಿಲ್ಲ. ಅಲ್ಲದೆ ಗರ್ಭಿಣಿ ರೇಖಾಳನ್ನು ಆಕೆಯ ತಂದೆಯೇ ಅಪಹರಿಸಲು ಪ್ರಯತ್ನಿಸಿದ್ದಾರೆ.
ರೇಖಾಳನ್ನು ಕರೆದೊಯ್ಯಲು ಆಕೆಯ ಮನೆಯವರು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಶನಿವಾರ ಮಧ್ಯಾಹ್ನದ ವೇಳೆಗೆ ರೇಖಾಳ ತಂದೆ ಹಾಗೂ ಇನ್ನಿತರು 8 ರಿಂದ 10 ಜನರು ಎರಡು ಕಾರಿನಲ್ಲಿ ಪ್ರಗತಿ ನಗರಕ್ಕೆ ಬಂದಿದ್ದಾರೆ. ರೇಖಾಳನ್ನು ಬಲವಂತವಾಗಿ ಕರೆದೊಯ್ಯಲು ಪ್ರಯತ್ನ ಮಾಡಿದ್ದಾರೆ ಎಂದು ರೇಖಾ ಪತಿ ರಮೇಶ್ ಆರೋಪಿಸಿದ್ದಾರೆ.
ಈ ಸಂದರ್ಭದಲ್ಲಿ ರೇಖಾಗೆ ಸಣ್ಣಪುಟ್ಟ ಗಾಯಗಳಾಗಿವೆ. ಸ್ಥಳೀಯರ ನೆರವಿನೊಂದಿಗೆ ರಮೇಶ್ ಹಾಗೂ ರೇಖಾ ರಕ್ಷಣೆ ಕೋರಿ ಗಂಗಾವತಿ ಗ್ರಾಮೀಣ ಠಾಣೆಗೆ ದೌಡಾಯಿಸಿದ್ದಾರೆ. ರೇಖಾಳನ್ನು ಬಳ್ಳಾರಿಯವರೆಗೆ ಕರೆದುಕೊಂಡು ಹೋಗಿ ಬಳಿಕ ಬಿಟ್ಟು ಹೋಗಿದ್ದಾರೆ. ರೇಖಾ ಶನಿವಾರ ತಡ ರಾತ್ರಿ ಆಟೋ ಮೂಲಕ ಗಂಗಾವತಿಗೆ ಬಂದು ಗ್ರಾಮೀಣ ಠಾಣೆಗೆ ಮಾಹಿತಿ ನೀಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv