ಕೋಲಾರ: ಅನ್ಯ ಜಾತಿಯ ಯುವಕನೊಂದಿಗೆ ಮಗಳು ಮದುವೆಯಾದ ಹಿನ್ನೆಲೆಯಲ್ಲಿ ಮರ್ಯಾದೆಗೆ ಅಂಜಿದ ತಂದೆ ಪೊಲೀಸ್ ಠಾಣೆ ಎದುರೆ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಗಳವಾರ ಕೋಲಾರದಲ್ಲಿ ನಡೆದಿದೆ.
ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆ ಎದುರು ಬೆಂಗಳೂರು ಮೂಲದ ಶಂಕರ್ ಪ್ರಸಾದ್ ಆತ್ಮಹತ್ಯೆಗೆ ಯತ್ನಿಸಿದ ತಂದೆ. ಮಗಳು ಅಂತರ್ಜಾತಿ ವಿವಾಹ ಮಾಡಿಕೊಂಡ ಹಿನ್ನೆಲೆಯಲ್ಲಿ ಮಂಗಳವಾರ ಪೊಲೀಸ್ ಠಾಣೆಗೆ ಬಂದಿದ್ದ ಯುವತಿಯ ತಂದೆ ಠಾಣೆ ಎದುರು ವಿಷ ಕುಡಿದು ಆತ್ಮಹತ್ಯೆಗೆ ಯತ್ನ ನಡೆಸಿದ್ದು, ಸದ್ಯ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಒಂದು ವಾರದ ಹಿಂದೆ ಮಗಳು ದಿವ್ಯಾ ಪ್ರೀತಿಸಿ ಕೋಲಾರದ ಗಂಗಮ್ಮನ ಪಾಳ್ಯ ನಿವಾಸಿ ಹರಿಕೃಷ್ಣ ಎಂಬುವನನ್ನು ಮದುವೆಯಾಗಿದ್ದಳು. ಬೆಂಗಳೂರಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದ ತಂದೆ ಕಳೆದ ಒಂದು ವಾರದಿಂದ ಮಗಳಿಗಾಗಿ ಹುಡುಕಾಟ ನಡೆಸಿದ್ದರು.
ಮಂಗಳವಾರ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮಗಳನ್ನ ಕಂಡು ಮನನೊಂದು ವಿಷ ಕುಡಿದು ಆತ್ಮಹತ್ಯೆಗೆ ಯತ್ನ ನಡೆಸಿದ್ದಾರೆ. ಆದರೂ ಕರಗದ ಮಗಳ ಮನಸು ಯುವಕನೊಂದಿಗೆ ಹೋಗುವುದಾಗಿ ಪೊಲೀಸರೊಂದಿಗೆ ಹೇಳಿಕೊಂಡಿದ್ದಾಳೆ.
ಇನ್ನೂ ಅಸ್ವಸ್ಥ ಶಂಕರ್ ಪ್ರಸಾದ್ಗೆ ಕೋಲಾರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ, ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನಿಸಲಾಗಿದೆ.