ತುಮಕೂರು: ಮಗನ ಮೊದಲ ಹುಟ್ಟುಹಬ್ಬಕ್ಕೆ ತಂದೆ ಅದ್ಧೂರಿಯಾಗಿ ತಯಾರಿ ನಡೆಸಿದ್ದರು. ಆದರೆ ಅಪಘಾತದಲ್ಲಿ ಪುತ್ರನ ಜನ್ಮದಿನದಂದೇ ತಂದೆ ಸಾವನ್ನಪ್ಪಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಮಧುಗಿರಿ ತಾಲೂಕಿನ ಕೆರೆಗಳ ಪಾಳ್ಯದ ನಿವಾಸಿ ನವೀನ್ (37) ಮೃತ ದುರ್ದೈವಿ. ಬೆಳಗ್ಗೆ ಹಾಲು ತರಲೆಂದು ಹೋಗುತ್ತಿದ್ದಾಗ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮೃತ ನವೀನ್ಗೆ ಇಬ್ಬರು ಹೆಣ್ಣು ಮಕ್ಕಳು, ಒಬ್ಬ ಗಂಡು ಮಗ. ಆ ಮಗನಿಗೆ ಇವತ್ತು ಮೊದಲ ವರ್ಷದ ಜನುಮ ದಿನ.
ಮಗ ಗಗನ್ನ ಹುಟ್ಟುಹಬ್ಬವನ್ನು ಇಡೀ ದಿನ ಸಂತಸದಿಂದ ಆಚರಣೆ ಮಾಡಬೇಕು ಎಂದುಕೊಂಡಿದ್ದರು. ನಂತರ ಮಗನ ಬರ್ತ್ ಡೇಯ ಸಂಭ್ರಮದ ಬಗ್ಗೆ ಲೆಕ್ಕಾಚಾರ ಹಾಕುತ್ತಾ ಹಾಲಿನ ಡೈರಿಯತ್ತ ಹೋಗುತ್ತಿದ್ದರು. ಅಷ್ಟರಲ್ಲೇ ಎದುರಿನಿಂದ ಬಂದ ಲಾರಿ ನವೀನ್ಗೆ ಡಿಕ್ಕಿ ಹೊಡೆದು ಸುಮಾರು 20 ಮೀಟರ್ ಎಳೆದುಕೊಂಡು ಹೋಗಿದೆ. ಪರಿಣಾಮ ನವೀನ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಇದೇ ವೇಳೆ ಹಾಲಿನ ಡೈರಿ ಸಮೀಪ ನಿಂತಿದ್ದ ಐದಾರು ಮಂದಿ ಲಾರಿ ಕಂಡು ಓಡಿ ಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ. ಪರಾರಿಯಾದ ಚಾಲಕನ ಬಂಧನಕ್ಕೆ ಪೊಲೀಸರು ಮುಂದಾಗಿದ್ದಾರೆ. ಈ ಸಂಬಂಧ ಮಧುಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂಭ್ರಮಿಸಬೇಕಾದ ಮನೆಯಲ್ಲಿ ಸೂತಕ ಆವರಿಸಿದೆ.