ವಿಜಯಪುರ: ಶಿಕ್ಷಣ ಸಂಸ್ಥೆ ಅಧ್ಯಕ್ಷ ದಾಮುನಾಯಕ್ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಮೊದಲ ಪತ್ನಿಯ ಮಗ ಮತ್ತು ಎರಡನೇ ಪತ್ನಿ ಸೇರಿಕೊಂಡು ಬರ್ಬರವಾಗಿ ಕೊಲೆ ಮಾಡಿರುವುದಾಗಿ ತನಿಖೆಯಿಂದ ತಿಳಿದು ಬಂದಿದೆ.
ದಾಮುನಾಯಕ್ ಕೊಲೆಯಾದ ಶಿಕ್ಷಣ ಸಂಸ್ಥೆ ಅಧ್ಯಕ್ಷ. ದಾಮುನಾಯಕ್ 2ನೇ ಪತ್ನಿ ಪ್ರೇಮಾ ದಾಮುನಾಯಕ್ ಹಾಗೂ ಮಗ ಸುಭಾಷ್ ದಾಮುನಾಯಕ್ನನ್ನ ಬಸವನಬಾಗೇವಾಡಿ ಪೊಲೀಸರು ಬಂಧಿಸಿದ್ದಾರೆ. ಇವರ ಜೊತೆ ಕೊಲೆಯಲ್ಲಿ ಭಾಗಿಯಾಗಿದ್ದ ಶಾಲೆಯ ಇಬ್ಬರು ಶಿಕ್ಷಕರು, ಓರ್ವ ಸುಪಾರಿ ಕಿಲ್ಲರ್ ಅಶೋಕ್ ಲಮಾಣಿ ಸೇರಿ ಒಟ್ಟು ಐವರನ್ನು ಪೊಲೀಸರು ಬಂಧಿಸಿದ್ದಾರೆ.
ಫೆ.25 ರಂದು ಬಸವನಬಾಗೇವಾಡಿ ಪಟ್ಟಣದ ಮಡಿವಾಳೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ದಾಮುನಾಯಕ್ ಕೊಲೆ ನಡೆದಿತ್ತು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದರು. ಇದೀಗ ತನಿಖೆಯಲ್ಲಿ ಮಲತಾಯಿ ಮತ್ತು ಮಗನ ನಡುವಿನ ಅನೈತಿಕ ಸಂಬಂಧ ಮತ್ತು ಆಸ್ತಿಗಾಗಿ ಕೊಲೆ ನಡೆದಿರುವುದು ಬಯಲಾಗಿದೆ.
ದಾಮುನಾಯಕ್ 2ನೇ ಹೆಂಡತಿ ಪ್ರೇಮಾ ಹಾಗೂ ಮಗ ಸುಭಾಷ್ ನಡುವೆ ಅಕ್ರಮ ಸಂಬಂಧ ಇತ್ತು. ಹೀಗಾಗಿ ಅನೈತಿಕ ಸಂಬಂಧ ಹಾಗೂ ಆಸ್ತಿಗಾಗಿ ತಾಯಿ ಮತ್ತು ಮಗ ಒಟ್ಟಿಗೆ ಸೇರಿ ಕೊಲೆ ಮಾಡಿದ್ದಾರೆ. ಸುಪಾರಿ ಕಿಲ್ಲರ್ ಅಶೋಕ್ ಲಮಾಣಿಯಿಂದ ಈ ಕೊಲೆ ಮಾಡಿಸಿದ್ದಾರೆ. ಈ ಕೊಲೆಯಲ್ಲಿ ಇಬ್ಬರು ಶಿಕ್ಷಕರಾದ ಅವ್ವಣ್ಣ ಗ್ವಾತಗಿ ಮತ್ತು ಶಿವಣ್ಣ ಕೊಣ್ಣೂರ್ ಭಾಗಿಯಾಗಿದ್ದಾರೆ. ಹೀಗಾಗಿ ಐವರನ್ನು ಬಂಧಿಸಿದ್ದೇನೆ ಎಂದು ಎಸ್ಪಿ ಅನುಪಮ್ ಅಗರವಾಲ್ ಸ್ಪಷ್ಟನೆ ನೀಡಿದ್ದಾರೆ.