ಬೆಳಗಾವಿ: ವರದಕ್ಷಿಣೆ ಕಿರುಕುಳಕ್ಕೆ ಒಂದು ವರ್ಷದ ಮಗು ತನ್ನ ತಂದೆ ಹಾಗೂ ಅಜ್ಜಿಯಿಂದಲೇ ಕೊಲೆಯಾದ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕೊಟಬಾಗಿ ಗ್ರಾಮದಲ್ಲಿ ನಡೆದಿದೆ.
ಜೋಯೆಲ್ ನಾಮದೇವ ನಡುವಿನಕೇರಿ (1) ಮೃತ ಮಗು. ವರದಕ್ಷಿಣೆ ಕಿರುಕುಳದ ಹಿನ್ನೆಲೆಯಲ್ಲಿ ಹಣಕ್ಕಾಗಿ ಮಗುವನ್ನು ಕೊಲೆ ಮಾಡಿದ್ದರೆಂದು ತಾಯಿ ಆರೋಪಿಸಿದ್ದಾರೆ. ಕಳೆದ ಒಂದು ವರ್ಷದಿಂದ ದಾಂಡೇಲಿಯಲ್ಲಿರುವ ತವರು ಮನೆಯಲ್ಲಿ ತಾಯಿ-ಮಗು ವಾಸಿಸುತ್ತಿದ್ದರು. ಮಗುವಿನ ತಾಯಿ 10 ದಿನಗಳ ಹಿಂದೆ ಗಂಡನ ಮನೆಗೆ ಹಸುಗೂಸನ್ನು ಕರೆದುಕೊಂಡು ಹೋಗಿದ್ದರು.
ಶುಕ್ರವಾರ ನನ್ನನ್ನು ಹೊರಗಡೆ ಕಳಿಸಿ ನನ್ನ ಗಂಡ ನಾಮದೇವ ಹಾಗೂ ಅವರ ತಾಯಿ ಮಗುವಿಗೆ ಕೀಟನಾಶಕ ಸಿಂಪಡಿಸಿ ಕೊಲೆ ಮಾಡಿದ್ದಾರೆ ಎಂದು ಮಗುವಿನ ತಾಯಿ ಆರೋಪಿಸಿದ್ದಾರೆ. ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.