ಮೈಸೂರು: ಹಳ್ಳಿಗಳ ಮಾರ್ಗದಲ್ಲಿ ತೆರಳುವ ಖಾಸಗಿ ಬಸ್ ಗಳಲ್ಲಿ ಡೋರ್ ಇಲ್ಲದ ಕಾರಣ ಬಸ್ ನಿಂದ ಪ್ರಯಾಣಿಕರು ಕೆಳಗೆ ಬಿದ್ದು ಸಾಯುವ ಸರಣಿ ಮೈಸೂರು ಜಿಲ್ಲಾ ವ್ಯಾಪ್ತಿಯಲ್ಲಿ ಮುಂದುವರಿದಿದೆ.
ಚಲಿಸುತ್ತಿದ್ದ ಖಾಸಗಿ ಬಸ್ ನಿಂದ ಬಿದ್ದು ತಂದೆ ಮೃತಪಟ್ಟು, ಮಗನಿಗೆ ಗಂಭೀರ ಗಾಯವಾಗಿರುವ ಘಟನೆ ಗುರುವಾರ ತಡರಾತ್ರಿ ಟಿ.ನರಸೀಪುರ ಮೈಸೂರು ರಸ್ತೆಯ ವರುಣಾ ಕೆರೆ ಬಳಿ ನಡೆದಿದೆ. ಚಿಕ್ಕಣ್ಣ(30)ಮೃತ ದುರ್ದೈವಿ.
ದಂಡಿಕೆರೆಯಿಂದ ಚಿಕ್ಕಣ್ಣ ತಮ್ಮ ಐದು ವರ್ಷದ ಪುತ್ರನ ಜೊತೆ ಭೂಗತಗಳ್ಳಿಗೆ ಖಾಸಗಿ ಬಸ್ ನಲ್ಲಿ ಬರುತ್ತಿದ್ದರು. ಬಸ್ ನ ಡೋರ್ ಬಳಿ ನಿಂತು ಇವರು ಸಾಗುತ್ತಿದ್ದರು. ಬಸ್ ಗೆ ಡೋರ್ ಕೂಡ ಇರಲಿಲ್ಲ. ಬಸ್ ವೇಗವಾಗಿ ಚಲಿಸಿದೆ. ಇದರಿಂದ ತಂದೆ ಮಗ ಹೊರಕ್ಕೆ ಉರುಳಿ ಬಿದ್ದಿದ್ದಾರೆ.
ತಕ್ಷಣ ಚಿಕ್ಕಣ್ಣನನ್ನು ಕೆ.ಆರ್. ಆಸ್ಪತ್ರೆಗೆ ದಾಖಲಿಸಿದರೂ ಕೂಡ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇನ್ನೂ ಇವರ ಐದು ವರ್ಷದ ಮಗ ತೀವ್ರವಾಗಿ ಗಾಯಗೊಂಡಿದ್ದು ಮೈಸೂರಿನ ಚೆಲುವಾಂಬ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳೀಯರು ಖಾಸಗಿ ಬಸ್ ತಡೆದು ಬಸ್ ಗಳಿಗೆ ಡೋರ್ ಇರದಿದ್ದಕ್ಕೆ ಪ್ರತಿಭಟಿಸಿದರು. ವರುಣ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಖಾಸಗಿ ಬಸ್ಗಳ ಹಾವಳಿ ಹಾಗೂ ನಿರ್ಲಕ್ಷ್ಯದ ಚಾಲನೆ ವಿಪರೀತವಾಗಿದೆ. ಕಾನೂನು ಮೀರಿ ರಸ್ತೆಗಿಳಿದು ಜನರ ಪ್ರಾಣಕ್ಕೆ ಕುತ್ತು ತರುತ್ತಿರುವ ಖಾಸಗಿ ಬಸ್ಗಳ ಮೇಲೆ ಕ್ರಮಕೈಗೊಳ್ಳಲು ಸಾರಿಗೆ ಸಚಿವರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕಿದೆ.