ಮಂಗಳೂರು: ಪ್ರವೀಣ್ ಇಡೀ ಊರಿಗೆ ಬೇಕಾದ ಹುಡುಗ. ಊರಿನಲ್ಲಿ ಯಾರ ಮನೆಯಲ್ಲಿ ಸಮಸ್ಯೆ ಇದ್ದರೂ ಅದಕ್ಕೆ ಸ್ಪಂದಿಸುತ್ತಿದ್ದ ಎಂದು ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ಕುಮಾರ್ ನೆಟ್ಟಾರು ಮಾವ ರಂಗ ಪೂಜಾರಿ ಹೇಳಿದರು.
ಪಬ್ಲಿಕ್ ಟಿವಿ ಜೊತೆ ಮಾತನಾಡಿ, ದುಡಿದ ದುಡ್ಡನ್ನೆಲ್ಲ ಕಷ್ಟದಲ್ಲಿರುವವರಿಗೆ ಖರ್ಚು ಮಾಡುತ್ತಿದ್ದ. ಸಾಲ ಮಾಡಿ ಕೋಳಿ ಅಂಗಡಿ ಮಾಡಿದ್ದ. ಕೊರೊನಾ ಸಂದರ್ಭದಲ್ಲಿ ಮನೆಮನೆಗೆ ದಿನಸಿ ವಸ್ತುಗಳನ್ನು ಪೂರೈಕೆ ಮಾಡಿದ್ದಾನೆ. ಪ್ರವೀಣ್ ಬಹಳ ಬಡ ಕುಟುಂಬದ ಹುಡುಗ. ರಾಜಕೀಯ ಅಂದ್ರೆ ಪ್ರವೀಣ್ ಗೆ ಬಹಳ ಇಷ್ಟ ಎಂದು ತಿಳಿಸಿದರು.
ಏನಿದು ಪ್ರಕರಣ?: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಪೆರುವಾಜೆ ಕ್ರಾಸ್ ಬಳಿ ಅಕ್ಷಯ್ ಹೆಸರಿನ ಕೋಳಿ ಮಾಂಸದ ಅಂಗಡಿ ಹೊಂದಿದ್ದ ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ಕುಮಾರ್ ನೆಟ್ಟಾರು(31), ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ಅಂಗಡಿ ಮುಚ್ಚಿ ಮನೆ ಕಡೆ ಹೊರಟಿದ್ದರು. ಈ ವೇಳೆ ಬೈಕಿನಲ್ಲಿ ಬಂದಿದ್ದ ಮೂವರು ತಲ್ವಾರ್ನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ತಕ್ಷಣವೇ ಪುತ್ತೂರು ಆಸ್ಪತ್ರೆಗೆ ದಾಖಲಿಸಿದರೂ ಕುತ್ತಿಗೆಯ ಭಾಗಕ್ಕೆ ತೀವ್ರ ಏಟು ಬಿದ್ದಿದ್ದ ಕಾರಣ ಪ್ರವೀಣ್ ಮೃತಪಟ್ಟಿದ್ದಾರೆ.
ಪ್ರವೀಣ್ ಹತ್ಯೆ ಸಂಬಂಧ ಪುತ್ತೂರು, ಸುಳ್ಯ, ಕಡಬ ತಾಲೂಕಿನಲ್ಲಿ ಸ್ವಯಂಪ್ರೇರಿತ ಬಂದ್ಗೆ ವಿಎಚ್ಪಿ, ಭಜರಂಗದಳ, ಹಿಂದೂ ಜಾಗರಣ ವೇದಿಕೆ ಕರೆ ನೀಡಿದೆ. ಇದನ್ನೂ ಓದಿ: ಕೊಲೆಗಡುಕರ ದಸ್ತಗಿರಿ ಮಾಡಿ ಕ್ರಮ ತೆಗೆದುಕೊಳ್ಳುತ್ತೇವೆ: ಬೊಮ್ಮಾಯಿ