ದಾವಣಗೆರೆ: ಅಭಿವೃದ್ಧಿ ವಿಚಾರಕ್ಕೆ ಸಂಬಂಧಿಸಿದಂತೆ ವೇದಿಕೆ ಮೇಲೆಯೇ ಮಾವ ಹಾಗೂ ಅಳಿಯ ಮಾತಿನ ಚಕಮಕಿ ನಡೆಸಿದ್ದಾರೆ.
ದಾವಣಗೆರೆ ನಗರದ ಹಳೆ ಬಸ್ ನಿಲ್ದಾಣ ಪುನರ್ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡುವ ವೇಳೆ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಹಾಗೂ ಸಂಸದ ಜಿ.ಎಂ.ಸಿದ್ದೇಶ್ವರ ನಡುವೆ ಜುಗಲ್ ಬಂದಿ ನಡೆಯಿತು. ವೇದಿಕೆ ಮೇಲೆ ಮಾತನಾಡಿದ ಶಾಸಕ ಶಾಮನೂರು ಶಿವಶಂಕರಪ್ಪ, ನಾವೇ ಜಿಲ್ಲೆಯನ್ನು ಅಭಿವೃದ್ಧಿ ಮಾಡಿದ್ದು ಮಲ್ಲಿಕಾರ್ಜುನ್, ನಾನು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಕೋಟ್ಯಂತರ ರೂಪಾಯಿ ಅನುದಾನ ತಂದಿದ್ದು ಎಂದರು.
ಇದಕ್ಕೆ ಪಕ್ಕದಲ್ಲೇ ಕೂತಿದ್ದ ಬಿಜೆಪಿ ಸಂಸದ ಹಾಗೂ ಶಾಮನೂರು ಶಿವಶಂಕರಪ್ಪ ನವರ ಅಳಿಯ ಜಿಎಂ ಸಿದ್ದೇಶ್ವರ್ ಕೌಂಟರ್ ಕೊಟ್ಟಿದ್ದಾರೆ. ದಾವಣಗೆರೆ ಅಭಿವೃದ್ಧಿಗೆ ಕೋಟ್ಯಂತರ ರೂಪಾಯಿ ಅನುದಾನ ಕೊಟ್ಟಿದ್ದು ಮೋದಿ ನೀವಲ್ಲ ಎಂದರು. ಇದಕ್ಕೆ ಪ್ರತ್ಯುತ್ತರ ನೀಡಿದ ಶಾಮನೂರು, ಮೋದಿ ಕೊಟ್ಟಿದ್ದು ಇರ್ಲಪ್ಪ, ನೀನೇನು ಕೊಟ್ಟಿದ್ದೀಯಾ ಹೇಳು ಎಂದು ಅಳಿಯನ ಕಾಲೆಳೆದರು.
ಇದಕ್ಕೆ ಉತ್ತರಿಸಿದ ಸಂಸದ ಜಿ.ಎಂ ಸಿದ್ದೇಶ್ವರ್, ನಾವು ಅಧಿಕಾರದಲ್ಲಿದ್ದಾಗ ಮೂರು ಬಾರಿ ಸಭೆಗೆ ಕರೆದರೂ ನೀವು ಬರಲಿಲ್ಲ ಎಂದು ಆರೋಪ ಮಾಡಿದ್ರು. ವೇದಿಕೆ ಮೇಲೆ ಅಕ್ಕಪಕ್ಕದಲ್ಲಿ ಕುಳಿತು ಒಬ್ಬರ ಕಾಲು ಒಬ್ಬರು ಎಳೆದುಕೊಂಡ ಮಾವ-ಅಳಿಯನನ್ನು ನೋಡಿ ಕಾರ್ಯಕರ್ತರು ವಾಗ್ವಾದಕ್ಕೆ ಇಳಿದಾಗ ಶಾಮನೂರು ಶಿವಶಂಕರಪ್ಪ ಅವರಿಗೆ ಮಾವನವರೇ ನೀವು ಆರಾಮವಾಗಿ ಕುಳಿತುಕೊಳ್ಳಿ ಎಂದು ಸಿದ್ದೇಶ್ವರ್ ಸಮಾಧಾನ ಮಾಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv