ಚಂಢೀಗಡ: ಉಡುಗೊರೆಯಾಗಿ ತಂದೆ ಜಾಗ್ವಾರ್ ಬದಲು ಬಿಎಂಡಬ್ಲ್ಯೂ ಕೊಡಿಸಿದ್ದಕ್ಕೆ ಸಿಟ್ಟಿಗೆದ್ದ ಮಗ ಕಾರನ್ನೇ ನದಿಗೆ ತಳ್ಳಿದ ಘಟನೆಯೊಂದು ಹರಿಯಾಣದ ಯಮುನಾ ನಗರದಲ್ಲಿ ನಡೆದಿದೆ.
ಹೌದು. ಸಾಮಾನ್ಯವಾಗಿ ಮಕ್ಕಳು ತಮ್ಮ ಪೋಷಕರಲ್ಲಿ ಗಿಫ್ಟ್ ಗಾಗಿ ಬೇಡಿಕೆಯಿಡುತ್ತಾರೆ. ಹಾಗೆಯೇ ಹರಿಯಾಣದ ಯುವಕನೊಬ್ಬ ತನಗೆ ಜಾಗ್ವಾರ್ ಕೊಡಿಸಬೇಕು ಎಂದು ತನ್ನ ತಂದೆಯ ಬಳಿ ಡಿಮ್ಯಾಂಡ್ ಮಾಡಿದ್ದಾನೆ. ಆದರೆ ತಂದೆ ಆತನಿಗೆ ಬಿಎಂಡಬ್ಲ್ಯೂ ಕೊಡಿಸಿದ್ದಾರೆ. ಇದರಿಂದ ಕೋಪಗೊಂಡ ಮಗ ಆ ಕಾರನ್ನೇ ನದಿಗೆ ತಳ್ಳಿದ್ದಾನೆ. ಅಲ್ಲದೆ ಬಳಿಕ ಅದರ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೀಗೆ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಕಾರು, ನದಿ ಮಧ್ಯೆ ಪೊದೆಯಲ್ಲಿ ಸಿಲುಕಿಕೊಂಡಿದೆ. ಈ ವೇಳೆ ಯುವಕನಿಗೆ ತಾನು ಮಾಡಿದ ತಪ್ಪಿನ ಅರಿವಾಗಿದೆ. ಅಲ್ಲದೆ ನದಿ ಮಧ್ಯದಿಂದ ಕಾರನ್ನು ಹೊರ ತರಲು ಪ್ರಯತ್ನ ಮಾಡಿದ್ದಾನೆ. ಈ ಸಂದರ್ಭದಲ್ಲಿ ಯುವಕನಿಗೆ ಸ್ಥಳೀಯರು ಸಹಾಯ ಮಾಡಿದ್ದು, ಕೊನೆಗೂ ಕಾರನ್ನು ದಡ ಸೇರಿಸಿದ್ದಾನೆ.
ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.