ಬಳ್ಳಾರಿ: ತುಂಗಭದ್ರಾ ನದಿ ತೀರದಲ್ಲಿ ಮರಳು ತುಂಬುವ ವೇಳೆ ಏಕಾಏಕಿ ನದಿ ನೀರು ಹೆಚ್ಚಾದ ಪರಿಣಾಮ ತಂದೆ-ಮಗ ಕೊಚ್ಚಿಹೋದ ಘಟನೆ ಜಿಲ್ಲೆಯ ಸಿರಗುಪ್ಪ ಬಳಿ ನಡೆದಿದೆ.
ಸಿರಗುಪ್ಪದ ಜಲ್ಸಾ ನಿವಾಸಿಗಳಾದ ರಫೀಕ್(32) ಹಾಗೂ ಇಸಾಕ್ (7) ನೀರುಪಾಲದವರು. ಇಂದು ಬೆಳಗ್ಗೆ ತುಂಗಭದ್ರಾ ನದಿ ತೀರದಲ್ಲಿ ಮರಳು ತರಲು ಹೋದಾಗ, ತುಂಗಭದ್ರಾ ನೀರಿನ ಹರಿವು ಏಕಾಏಕಿ ಹೆಚ್ಚಿದ್ದರ ಪರಿಣಾಮ ನೀರಿನಲ್ಲಿ ಕೊಚ್ಚಿಹೋಗಿದ್ದಾರೆ.
ಇಂದು ಬೆಳಗಿನ ಜಾವ ಎತ್ತಿನ ಬಂಡಿಯಲ್ಲಿ ಮರಳು ತುಂಬಲು ಸಿರಗುಪ್ಪದ ನಿವಾಸಿಗಳು ತೆರಳಿದ್ದಾರೆ. ಆದರೆ ಈ ವೇಳೆ ತುಂಗಭದ್ರಾ ನದಿಯಲ್ಲಿ ನೀರು ಏಕಾಏಕಿ ಹೆಚ್ಚಾದ ಪರಿಣಾಮ, ನದಿಯಲ್ಲಿ ಮರಳು ತುಂಬುತ್ತಿದ್ದ ಜನರು ಹಾಗೂ ಎತ್ತಿನ ಬಂಡಿಗಳು ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿವೆ. ಕೆಲವರು ಈಜಿ ದಡಸೇರಿದರೇ, ಇಬ್ಬರು ನೀರು ಪಾಲಾಗಿದ್ದರು. ಅಲ್ಲದೇ ಎತ್ತುಗಳ ಸಹ ಈಜಿಕೊಂಡ ದಡ ಸೇರಿದ್ದವು.
ಘಟನೆ ತಿಳಿಯುತ್ತಿದ್ದಂತೆ ಸಿರಗುಪ್ಪ ಪೊಲೀಸರು ಹಾಗೂ ತಾಲೂಕು ಆಡಳಿತ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಜಿಲ್ಲಾಡಳಿತ ಗುರುವಾರ ಜಲಾಶಯದಿಂದ 50 ಸಾವಿರದಿಂದ ಒಂದೂವರೆ ಲಕ್ಷ ಕ್ಯೂಸೆಕ್ ನೀರನ್ನು ತುಂಗಭದ್ರಾ ನದಿಗೆ ಬಿಡಲಾಗುತ್ತದೆ ಎಂದು ಎಚ್ಚರಿಕೆ ಸಹ ನೀಡಿತ್ತು. ಆದರೆ ನಿವಾಸಿಗಳು ಜಿಲ್ಲಾಡಳಿತ ಎಚ್ಚರಿಕೆಯನ್ನು ನಿರ್ಲಕ್ಷಿಸಿದ್ದರಿಂದ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.