ಧಾರವಾಡ: ವಾಹನ ತೊಳೆಯಲೆಂದು ಹೋದ ತಂದೆ, ಮಗ ಇಬ್ಬರೂ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಧಾರವಾಡ ತಾಲೂಕಿನ ಕ್ಯಾರಕೊಪ್ಪ ಗ್ರಾಮದಲ್ಲಿ ನಡೆದಿದೆ.
ಗದಿಗೆಪ್ಪ ಅಂಗಡಿ(43) ಹಾಗೂ ರವಿ ಅಂಗಡಿ(14) ಮೃತ ದುರ್ದೈವಿಗಳಾಗಿದ್ದಾರೆ. ಟಂಟಂ ವಾಹನವನ್ನು ತೊಳೆಯಲೆಂದು ತಂದೆ, ಮಗ ಇಬ್ಬರೂ ಕೆರೆಗೆ ಹೋಗಿದ್ದರು. ಈ ವೇಳೆ ಮಗ ಕೆರೆಯಲ್ಲಿ ಸಿಲುಕಿ ಮುಳುಗುತ್ತಿದ್ದ. ಆತನನ್ನು ಉಳಿಸಲು ಹೋಗಿ ತಂದೆ ಕೂಡ ನೀರು ಪಾಲಾಗಿದ್ದಾನೆ. ಸ್ಥಳೀಯರಿಗೆ ಈ ವಿಷಯ ಗೊತ್ತಾದ ಕೂಡಲೇ ಇಬ್ಬರನ್ನು ಹೊರಗಡೆ ತೆಗೆದಿದ್ದಾರೆ. ಆದರೆ ಅಷ್ಟರಲ್ಲಿ ಗದಿಗೆಪ್ಪ ಅಸುನೀಗಿದ್ದ. ಮಗ ರವಿ ನಿತ್ರಾಣ ಸ್ಥಿತಿ ತಲುಪಿದ್ದ. ಆತನನ್ನು ಕೂಡಲೇ ಅಂಬ್ಯುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ರವಿ ಕೂಡ ಅಸುನೀಗಿದ್ದಾನೆ. ಇದನ್ನೂ ಓದಿ: 3-4 ತಲೆಮಾರಿಗೆ ಆಗುವಷ್ಟು ಮಾಡಿಕೊಂಡಿದ್ದೇವೆ, ಈಗ ಋಣ ತೀರಿಸುವ ಸಮಯ ಬಂದಿದೆ: ರಮೇಶ್ ಕುಮಾರ್
ಗದಿಗೆಪ್ಪ ಚಿಕ್ಕ ಟಂಟಂ ಇಟ್ಟುಕೊಂಡು ಬಾಡಿಗೆ ನಡೆಸುತ್ತಿದ್ದ. ಇದೇ ಆತನ ಕುಟುಂಬಕ್ಕೆ ಆಸರೆಯಾಗಿತ್ತು. ಆದರೆ ಇದೀಗ ಈ ವಾಹನದ ಮಾಲೀಕನೇ ಧಾರುಣವಾಗಿ ಸಾವನ್ನಪ್ಪಿದ್ದು, ಇಡೀ ಕುಟುಂಬಕ್ಕೆ ದಿಕ್ಕು ತೋಚದಂತಾಗಿದೆ. ಇನ್ನು ಬಾಳಿ ಬದುಕಬೇಕಾದ ರವಿ ಉದಯಕ್ಕೂ ಮುನ್ನವೇ ಅಸ್ತಂಗತನಾಗಿದ್ದಾನೆ. ಗ್ರಾಮಸ್ಥರು ಎರಡೂ ಶವಗಳನ್ನು ಧಾರವಾಡ ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ಪೊಲೀಸರ ಸಹಕಾರದೊಂದಿಗೆ ತೆಗೆದುಕೊಂಡು ಬಂದಿದ್ದರು. ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ಈ ಬಗ್ಗೆ ದೂರು ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ವಿದ್ಯುತ್ ಕಂಬಕ್ಕೆ ಕಟ್ಟಿ ಪತ್ನಿಗೆ ಹಿಗ್ಗಾಮುಗ್ಗಾ ಥಳಿಸಿದ – ರಸ್ತೆಯಲ್ಲೇ ಧರಧರನೇ ಎಳೆದಾಡಿದ