ಮಡಿಕೇರಿ: ತಂದೆ ಹಾಗೂ ಮಗನ ನಡುವೆ ಮನೆಯಲ್ಲಿ ದಿನನಿತ್ಯ ಜಗಳವಾಗುತ್ತಿರುವ ಹಿನ್ನೆಲೆಯಲ್ಲಿ ಮನನೊಂದ ತಂದೆ ತೋಟದ ಸಮೀಪವೇ ನೇಣಿಗೆ ಶರಣಾಗಿದ್ದಾರೆ. ತಂದೆಯ ಆತ್ಮಹತ್ಯೆ ಸುದ್ದಿ ತಿಳಿದು ಮಗನು ತೋಟದ ಸಮೀಪದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆಯ ತಾಲೂಕಿನ ಬಿಳುಗುಂದ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಸ್ಥಳೀಯ ನಿವಾಸಿಗಳಾದ ತಂದೆ ಸುಬ್ಬಯ್ಯ (76) ಹಾಗೂ ಪುತ್ರ ಗಿರೀಶ್ (39) ಮೃತ ವ್ಯಕ್ತಿಗಳು. ತಂದೆ ಮಗನ ನಡುವೆ ಪ್ರತಿನಿತ್ಯ ಜಗಳ ಆಗುತ್ತಿದ್ದು, ಸೋಮವಾರವು ಮನೆಯಲ್ಲಿ ಇಬ್ಬರೇ ಇದ್ದ ಕಾರಣ ಜಗಳವಾಗಿದೆ. ಈ ಹಿನ್ನೆಲೆಯಲ್ಲಿ ಮಾ.7ರಂದು ಸಂಜೆ ಮಂಡಲ ಕಚೇರಿಗೆ ಹೋಗಿ ಬರುವುದಾಗಿ ತೆರಳಿದ್ದ ಸುಬ್ಬಯ್ಯ ತೋಟದ ಮಧ್ಯೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತಂದೆಯ ಆತ್ಮಹತ್ಯೆಯ ಸುದ್ದಿ ತಿಳಿದು ಇದರಿಂದ ಮನನೊಂದ ಪುತ್ರ ಗಿರೀಶ್ ತೋಟದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸುಬ್ಬಯ್ಯ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು ಮತ್ತು ಗಿರೀಶ್ ಪತ್ನಿಯನ್ನು ತೊರೆದಿದ್ದರು ಎನ್ನಲಾಗಿದೆ. ಇವರಿಬ್ಬರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸುಬ್ಬಯ್ಯ ಅವರ ಪತ್ನಿ ಕಾವೇರಮ್ಮ ಅವರು ನೀಡಿರುವ ದೂರಿನ ಹಿನ್ನೆಲೆಯಲ್ಲಿ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ದಕ್ಷಿಣ ಭಾರತೀಯರಿಗೆ ಯುದ್ಧದ ಅನುಭವವಾಯ್ತು- ನನಗೆ ಮಾತೃಭೂಮಿ ಮೇಲೆ ಪ್ರೀತಿ ಜಾಸ್ತಿಯಾಯ್ತು: ಅನೀಫ್ರೆಡ್ ಡಿಸೋಜಾ