ಚಿತ್ರದುರ್ಗ: ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅಪ್ಪ ಮತ್ತು ಮಗಳು ಮೃತಪಟ್ಟಿರುವ ಘಟನೆ ಜಿಲ್ಲೆಯ ಹೊಳಲ್ಕೆರೆ ಸಮೀಪದ ಎನ್.ಜಿ. ಹಳ್ಳಿ ಗೇಟ್ ಬಳಿ ನಡೆದಿದೆ.
ಹೊಸದುರ್ಗದ ಜವಳಿ ಉದ್ಯಮಿ ಮಂಜುನಾಥ್ (40), ಪುತ್ರಿ ರಾಜೇಶ್ವರಿ(1) ಮೃತ ದುರ್ದೈವಿಗಳು. ಇಂದು ಬೆಳಗಿನ ಜಾವ ಇವರು ದಾವಣಗೆರೆಯಿಂದ ಹೊಸದುರ್ಗಕ್ಕೆ ಕುಟುಂಬ ಸಮೇತರಾಗಿ ಕಾರಿನಲ್ಲಿ ಹೋಗುತ್ತಿದ್ದರು. ಈ ವೇಳೆ ಕಾರು ಅತೀ ವೇಗದಿಂದ ಎನ್.ಜಿ. ಹಳ್ಳಿ ಗೇಟ್ ಬಳಿ ಮರಕ್ಕೆ ಡಿಕ್ಕಿ ಹೊಡೆದಿದೆ.
ಪರಿಣಾಮ ಮಂಜುನಾಥ್ ಮತ್ತು ರಾಜೇಶ್ವರಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇನ್ನು ಈ ಅಪಘಾತದಿಂದ ಕಾರಿನಲ್ಲಿದ್ದ ಮಂಜುನಾಥ್ ಪತ್ನಿ ಶಿಲ್ಪ, ಮಗಳು ಶಾರದ, ಸಾನ್ವಿತ, ಹಾಗೂ ಸ್ನೇಹಿತ ರಂಗನಾಥ ಎಂಬ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಸಮೀಪದ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.
ಈ ಕುರಿತು ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.