ಕಾರವಾರ: ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಮತ್ತೆ ಕೊರೊನಾ ತನ್ನ ಅಟ್ಟಹಾಸವನ್ನು ಮುಂದುವರಿಸಿದ್ದು, ಇಂದು ಮತ್ತೆ ಏಳು ಹೊಸ ಪ್ರಕರಣ ದಾಖಲಾಗುವ ಮೂಲಕ ಸೋಂಕಿತರ 31ಕ್ಕೆ ಏರಿಕೆಯಾಗಿದೆ. ಇಬ್ಬರು ಮಕ್ಕಳು ಮತ್ತು ವೃದ್ಧರು ಸೇರಿ ಒಟ್ಟು ಏಳು ಮಂದಿಯಲ್ಲಿ ಕೊರೊನಾ ದೃಢವಾಗಿದೆ. ರೋಗಿ ಸಂಖ್ಯೆ 659ರ ಯುವತಿಯಿಂದಲೇ ಒಟ್ಟು ಆರು ಜನರಿಗೆ ಸೋಂಕು ದೃಢವಾಗಿದ್ದು, ಭಟ್ಕಳ ಜನತೆ ಬೆಚ್ಚಿ ಬೀಳುವಂತೆ ಮಾಡಿದೆ.
ಈ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿಸಿ, ಸೋಂಕಿತ ವ್ಯಕ್ತಿಗಳ ನೇರ ಸಂಪರ್ಕದಲ್ಲಿದ್ದವರಿಗೆ ಸೋಂಕು ಬಂದಿದ್ದು, ನೇರ ಸಂಪರ್ಕಕ್ಕೆ ಬಂದ ವ್ಯಕ್ತಿಗಳ ಪತ್ತೆ ನಡೆದಿದೆ. ಕೊರೊನಾ ಸೋಂಕಿತರಲ್ಲಿ ಮಹಿಳೆಯರ ಸಂಖ್ಯೆ ಜಾಸ್ತಿ ಇದೆ. ಯಾರೇ ಸೋಂಕಿತರ ಸಂಪರ್ಕಕ್ಕೆ ಬಂದಿದ್ದಲ್ಲಿ ಜಿಲ್ಲಾಡಳಿತಕ್ಕೆ ತಿಳಿಸಿ. ಕಠಿಣ ನಿಯಮಗಳಿಂದ ಸಾರ್ವಜನಿಕರಿಗೆ ತೊಂದರೆಯಾಗಬಹುದು. ಆದರೆ ಇದು ಅವಶ್ಯಕವಾಗಿದೆ, ಜನರು ಗಾಬರಿಗೊಳಗಾಗಬಾರದು ಎಂದು ತಿಳಿಸಿದರು.
ಪತಾಂಜಲಿ ಆಸ್ಪತ್ರೆ ರಕ್ಷಣಾ ವ್ಯವಸ್ಥೆಯ ಆಸ್ಪತ್ರೆಗಳಲ್ಲಿ ಅಗ್ರಸ್ಥಾನಿಯಾಗಿದೆ. ಕೆಲವೊಂದು ರಕ್ಷಣಾ ವ್ಯವಸ್ಥೆಯ ಕಾರಣಗಳಿಂದ ಆಸ್ಪತ್ರೆಯನ್ನು ಅವರಿಗೆ ಬಿಟ್ಟುಕೊಡಲೇಬೇಕಾಗಿದೆ. ಅವರು ನಮ್ಮ ಜೊತೆ ಉತ್ತಮವಾಗಿ ಸಹಕರಿಸಿದ್ದಾರೆ. ಇನ್ನೂ ಮುಂದೆ ಕಾರವಾರ ವೈದ್ಯಕೀಯ ಶಿಕ್ಷಣ ಸಂಸ್ಥೆಯ ಕೊರೊನಾ ವಾರ್ಡಿನಲ್ಲಿ ಚಿಕಿತ್ಸೆ ಮುಂದುವರಿಯಲಿದೆ. ಈಗಾಗಲೇ 30 ಸ್ವಾಬ್ಗಳ ಮೇಲೆ ಜಿಲ್ಲಾಡಳಿತ ಗಮನಹರಿಸುತ್ತಿದೆ. ಅದು ಪ್ರೈಮರಿ ಕಾಂಟ್ಯಾಕ್ಟ್ ಗಳಿಂದ ಹೋಗಿರೋ ಸ್ವಾಬ್ಗಳು. ಆ ವರದಿಗಳು ನಾಳೆ ಬರುವ ಸಾಧ್ಯತೆ ಇದೆ ಎಂದರು.
ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಎಂ.ರೋಷನ್ ಮಾತನಾಡಿ, ಶುಕ್ರವಾರ 12 ಜನರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಸೋಂಕಿತರನ್ನು ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ನಿಗಾವಹಿಸಲಾಗುತ್ತಿದೆ. ರಂಜಾನ್ ಹಿನ್ನೆಲೆಯಲ್ಲಿ ಉಪವಾಸ ಮಾಡಲು ಆಸ್ಪತ್ರೆಯಲ್ಲಿ ಅವಕಾಶ ಕೊಡುವಂತೆ ಜಿಲ್ಲಾಡಳಿತಕ್ಕೆ ಸೋಂಕಿತರು ಮನವಿ ಮಾಡಿಕೊಂಡಿದ್ದರು. ರಂಜಾನ್ ಇರುವುದರಿಂದ ಉಪವಾಸವಿದ್ದು, ಸೋಂಕಿತರು ಉಪವಾಸ ಮಾಡುತ್ತಿದ್ದರು. ಆದರೆ ಅವರ ಆರೋಗ್ಯ ಮತ್ತಷ್ಟು ಹದಗೆಡುವುದರಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಗೂ ಕೆಲವರನ್ನು ನೇರ ಸಂಪರ್ಕಿಸಿ ಮನಪರಿವರ್ತನೆ ಮಾಡಿದ್ದೇವೆ. ಕಡ್ಡಾಯವಾಗಿ ಮಾತ್ರೆ ಸೇರಿದಂತೆ ಚಿಕಿತ್ಸೆಗೆ ಸಹಕರಿಸುವಂತೆ ಸೂಚನೆ ನೀಡಲಾಗಿದೆ. ಈ ಮೂಲಕ ಉಪವಾಸ ಮಾಡುವ ಅವಕಾಶವನ್ನು ತಿರಸ್ಕರಿಸಲಾಗಿದೆ ಎಂದರು.