ಚಿಕ್ಕೋಡಿ: ಬೆತ್ತ ಹಿಡಿದು ನಿಂತ ಯುವಕರು ಎದುರು ಬರುವ ಎತ್ತಿನ ಮೇಲೆ ಹಲ್ಲೆ ಮಾಡಿ, ಮುಳ್ಳಿನ ದಾರಿ ತುಳಿದು ಬರುವಂತೆ ಹಿಂಸಿಸುವ ವಿಚಿತ್ರ ಮೌಢ್ಯಾಚರಣೆ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಕಾಗವಾಡದಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆಯ ಕೆಲವು ಭಾಗದಲ್ಲಿ ಕಾರಹುಣ್ಣಿಮೆ ನಂತರದ ದಿನಗಳಲ್ಲಿ ಕರಿ ಹಾಯುವ ಆಚರಣೆ ನಡೆಯುತ್ತದೆ. ಮುಳ್ಳು ಇರುವ ಬನ್ನಿ ಮರದ ರೆಂಬೆಗಳನ್ನು ತಂದು ರಸ್ತೆಯ ಮೇಲೆ ಹರಡಲಾಗಿರುತ್ತದೆ. ಇದರ ಮೇಲೆ ಗ್ರಾಮದ ಅಥವಾ ಪಟ್ಟಣ ಗೌಡರ ಮನೆಯ ಎತ್ತುಗಳನ್ನು ಹಿಡಿದು ತಂದು ಬನ್ನಿ ಮುಳ್ಳು ಸಾಲನ್ನು ದಾಟಿಸಲಾಗುತ್ತದೆ. ಆದರೆ ಎತ್ತುಗಳು ಬೆದರಿ ಹಿಂದಕ್ಕೆ ಸರಿದಾಗ ಅವುಗಳನ್ನು ಹಕ್ಕುದಾರರು ಹೊಡೆಯುತ್ತಾರೆ. ಹಕ್ಕುದಾರನ್ನು ಮೊದಲೇ ನಿರ್ಧರಿಸಲಾಗಿರುತ್ತದೆ. ಅವರಿಗೆ ಮಾತ್ರ ಎತ್ತುಗಳನ್ನು ಹೊಡೆಯುವ ಅವಕಾಶವಿರುತ್ತದೆ.
ಎತ್ತುಗಳು ಬನ್ನಿ ಮುಳ್ಳುಗಳನ್ನು ದಾಟಿ ಹೋದರೆ ಮಳೆ ಬೆಳೆ ಉತ್ತಮವಾಗಿ ಬರುತ್ತದೆ ಎನ್ನುವ ನಂಬಿಕೆ ಇದೆ. ಹೀಗಾಗಿ ನಿನ್ನೆ 100 ಕ್ಕೂ ಹೆಚ್ಚು ಜನರು ಎತ್ತುಗಳ ಮೇಲೆ ಬೆತ್ತದಿಂದ ಹೊಡೆದು ಬನ್ನಿ ಮುಳ್ಳು ದಾಟಿಸಿದರು.
ಬುಧವಾರ ಸಂಜೆ ಕಾಗವಾಡ ಪಟ್ಟಣದಲ್ಲಿ ಜನ ಸಮೂಹವೇ ಎತ್ತುಗಳು ಕರಿ ಹಾಯುವುದನ್ನು ನೋಡಲು ಕಾದು ನಿಂತಿತ್ತು. ಸುಮಾರು ವರ್ಷಗಳಿಂದ ನಡೆದು ಬಂದ ಸಂಪ್ರದಾಯ ಇದಾಗಿದ್ದು, ಎತ್ತುಗಳಿಗೆ ಬೆತ್ತದಿಂದ ಮನ ಬಂದಂತೆ ಹಲ್ಲೆ ಮಾಡಿದ್ದು ಪ್ರಾಣಿ ಪ್ರಿಯರ ಆಕ್ರೋಶಕ್ಕೆ ಕಾರಣವಾಯಿತು.