ಬೆಂಗಳೂರು: ರಾಜಧಾನಿಯಲ್ಲಿ ಮಹದಾಯಿ ಪ್ರತಿಭಟನೆ ತೀವ್ರಗೊಂಡಿದ್ದು, ಪ್ರತಿಭಟನಾಗಾರರು ನಡುಗುವ ಚಳಿಯಲ್ಲಿ ಬಿಜೆಪಿ ಕಚೇರಿ ಮುಂಭಾಗದ ರಸ್ತೆಯಲ್ಲೇ ಮಲಗಿ ರಾತ್ರಿಯನ್ನು ಕಳೆದಿದ್ದಾರೆ. ಹುಬ್ಬಳ್ಳಿ, ಧಾರವಾಡ ಗದಗ, ಬಾಗಲಕೋಟೆ ಭಾಗದಿಂದ ಸುಮಾರು 500ಕ್ಕೂ ಹೆಚ್ಚು ರೈತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು, ರಾತ್ರಿ ಬಿಜೆಪಿ ಕಚೇರಿ ಮುಂದೆಯೇ ಅಡುಗೆ ಮಾಡಿ ಊಟ ಮಾಡಿದ್ದಾರೆ.
ಸಂಸದೆ ಶೋಭಾ ಕರಂದ್ಲಾಜೆ ಪ್ರತಿಭಟನಾ ಸ್ಥಳಕ್ಕೆ ಬಂದು, ಧರಣಿ ಹಿಂಪಡೆಯುವಂತೆ ಮನವಿ ಮಾಡಿಕೊಂಡಿದ್ದರು. ಆದ್ರೆ ಹೋರಾಟಗಾರರು ಸ್ಥಳಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಆಗಮಿಸಿ ಸ್ಪಷ್ಠೀಕರಣ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ. ಮಹದಾಯಿ ರಾಜಿ ಪಂಚಾಯ್ತಿ ಬಿಜೆಪಿ ನಾಯಕರಿಗೆ ತಿರುಗು ಬಾಣವಾಗಿದೆ ಎಂಬ ಅನುಮಾನ ಎಲ್ಲರಲ್ಲಿ ಮೂಡಿದೆ. ಕಾನೂನು ಬಿಕ್ಕಟ್ಟಿಗೆ ರಾಜಕೀಯ ಪರಿಹಾರ ಕಂಡುಕೊಳ್ಳಲು ಹೋಗಿ ಇದೀಗ ಬಿಜೆಪಿ ಪೇಚಿಗೆ ಸಿಲುಕಿದೆ ಎಂದು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.
ಮಿತ್ರಪಕ್ಷವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಇದ್ದಿದರಿಂದ ಗೋವಾ ಸಿಎಂ ಮನೋಹರ ಪರಿಕ್ಕರ್ ಒಪ್ಪಿಗೆ ಸೂಚಿಸಿದ್ದಾರೆ ಎಂದು ಹೇಳಲಾಗುತ್ತಿದ್ದು, ಇದೀಗ ಮಿತ್ರಪಕ್ಷ ಕಿರಿಕ್ ಮಾಡುತ್ತಿದೆ. ಹೀಗಾಗಿ ಮೂರು ದಿನವಾದರೂ ಆಕ್ರೋಶ ತಣಿಯುತ್ತಿಲ್ಲ.
ಇತ್ತ ರಾಜ್ಯ ಸರ್ಕಾರ ಮಾತುಕತೆಗೆ ನಾವು ಸಿದ್ಧ ಎರಡು-ಮೂರು ದಿನಗಳಲ್ಲಿ ಸಭೆ ಕರೆಯಿರಿ. ನಾವು ಬರಲು ಸಿದ್ಧರಿದ್ದೇವೆ ಎಂದು ಗೋವಾ ಮತ್ತು ವಹಾರಾಷ್ಟ್ರ ಸರ್ಕಾರಕ್ಕೆ ಪತ್ರ ಬರೆದಿದೆ.