ಚಿತ್ರದುರ್ಗ: ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ರೈತ ಸಂಘಟನೆ ನಡೆಸುತ್ತಿರುವ ಭಾರತ್ ಬಂದ್ಗೆ ಕೋಟೆನಾಡು ಚಿತ್ರದುರ್ಗದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಪ್ರತಿಭಟನಾಕಾರರು ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರಕ್ಕೆ ಈರುಳ್ಳಿ ಹಾರ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿತ್ರದುರ್ಗದಲ್ಲಿ ವ್ಯಾಪಾರ ವಹಿವಾಟು, ಬಸ್ ಸಂಚಾರ ಸುಗಮವಾಗಿದ್ದು, ಬಂದ್ ಕೇವಲ ಗಾಂಧಿಸರ್ಕಲ್ಗೆ ಸೀಮಿತವಾಗಿದೆ. ಹುಚ್ಚವನಹಳ್ಳಿ ಮಂಜುನಾಥ್ ಬಣ ಗಾಂಧಿಸರ್ಕಲ್ನಲ್ಲಿ ಪ್ರತಿಭಟನೆ ನಡೆಸಿದೆ. ರೈತ ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮಿಕಾಂತ್ ನೇತೃತ್ವದಲ್ಲಿ ಮೋದಿ ಭಾವಚಿತ್ರಕ್ಕೆ ಈರುಳ್ಳಿ ಹಾರ ಹಾಕಿ ಬೆಂಕಿ ಹಾಕಲು ರೈತರು ಮುಂದಾಗಿದ್ದಾರೆ. ಇದನ್ನೂ ಓದಿ: ತರಕಾರಿ ಸುರಿದು ರೈತರ ಆಕ್ರೋಶ – ಜಿಲ್ಲೆಗಳಲ್ಲಿ ಪ್ರತಿಭಟನೆ ಆರಂಭ
ರೈತರು ಬಸ್ ತಡೆದು ಪ್ರತಿಭಟನೆ ನಡೆಸಲು ಮುಂದಾದಗಿದ್ದರು ಈ ವೇಳೆ ಪೊಲೀಸರು ತಡೆದರು. ಆಗ ತಮಟೆ ಬಾರಿಸಿ ಆಕ್ರೋಶ ವ್ಯಕ್ತಪಡಿಸಿದ ರೈತರು ನಂತರ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದರು. ಉಳಿದಂತೆ ಜಿಲ್ಲೆಯಾದ್ಯಂತ ಶಾಂತ ವಾತಾವರಣವಿದೆ. ಎಂದಿನಂತೆ ಜನಜೀವನ ಸುಗಮವಾಗಿದೆ. ಪ್ರತಿಭಟನೆಯಲ್ಲಿ ಜಿಲ್ಲೆಯ ಪ್ರವೀಣ್ ಶೆಟ್ಟಿ ಬಣದ ಕನ್ನಡ ರಕ್ಷಣಾ ವೇದಿಕೆ ಭಾಗಿಯಾಗಿದ್ದು, ನಾರಾಯಣ ಗೌಡ ಬಣ ನೈತಿಕ ಬೆಂಬಲ ನೀಡಿದೆ. ಉಳಿದಂತೆ ಕಟ್ಟಡ ಕಾರ್ಮಿಕರು, ಎಐಟಿಯುಸಿ ಕಾರ್ಯಕರ್ತರು ಸೇರಿದಂತೆ ಇತರೆ ಕಾರ್ಮಿಕ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗಿಯಾಗಿವೆ. ಇದನ್ನೂ ಓದಿ: ಬಂದ್ ಠುಸ್ ಪಟಾಕಿ – ಬೆಂಗಳೂರಿನಲ್ಲಿ ಎಂದಿನಂತೆ ಸಾಗುತ್ತಿದೆ ಜನ ಜೀವನ