ಬೆಂಗಳೂರು: ದೇವನಹಳ್ಳಿಯ (Devanahalli) ಚನ್ನರಾಯಪಟ್ಟಣ (Channarayapatna) ಸೇರಿ ಸುತ್ತಮುತ್ತ 13 ಹಳ್ಳಿಗಳ 1,777 ಎಕರೆ ಭೂಸ್ವಾಧೀನ ವಿರೋಧಿಸಿ ದೇವನಹಳ್ಳಿ ರೈತರು ಬೆಂಗಳೂರಿನ ಸಂಜಯ್ ನಗರದಲ್ಲಿರುವ ಸಚಿವ ಮುನಿಯಪ್ಪ (Muniyappa) ಅವರ ಮನೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಸಚಿವರ ಮನೆಯ ಮುಂದೆ ಚಾಪೆ ಹಾಕಿಕೊಂಡು ಧರಣಿ ಕೂತಿದ್ದಾರೆ.
ದೇವನಹಳ್ಳಿಯ ಚನ್ನರಾಯಪಟ್ಟಣ ಸೇರಿ 13 ಹಳ್ಳಿಗಳಲ್ಲಿ 1,777 ಎಕರೆ ಜಾಗವನ್ನು ಕೆಐಎಡಿಬಿ ಭೂಸ್ವಾಧೀನಕ್ಕೆ ಮುಂದಾಗಿತ್ತು. ಇದನ್ನು ವಿರೋಧಿಸಿ ರೈತರು 950 ದಿನಗಳಿಂದ ದೇವನಹಳ್ಳಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದರು. ಲೋಕಸಭೆ ಚುನಾವಣೆ ವೇಳೆ ಭೂಸ್ವಾಧೀನ ಮಾಡುವುದಿಲ್ಲ ಎಂದು ಸಚಿವ ಮುನಿಯಪ್ಪ ರೈತರಿಗೆ ಭರವಸೆ ಕೊಟ್ಟಿದ್ದರು. ಆದರೆ ನಿನ್ನೆ (ನ.6) ಏಕಾಏಕಿಯಾಗಿ ರೈತರಿಗೆ ಕೆಐಎಡಿಬಿ ನೋಟಿಸ್ ನೀಡಿದೆ. ಇದರಿಂದ ಕೋಪಗೊಂಡ ರೈತರು ಸಚಿವರ ಮನೆಯ ಮುಂದೆ ಪ್ರತಿಭಟನೆ ನಡೆಸಿದ್ದರು. ವಿಷ್ಯ ಬೇಕಾದರೂ ಕೊಡಿ ಆದರೆ ನಾವು ಯಾವುದೇ ಕಾರಣಕ್ಕೂ ಜಮೀನು ಕೊಡುವುದಿಲ್ಲ ಎಂದು ಘೋಷಣೆ ಕೂಗಿದರು.ಇದನ್ನೂ ಓದಿ: ಅನುಷ್ಕಾ ಶೆಟ್ಟಿ ಫ್ಯಾನ್ಸ್ಗೆ ಡಬಲ್ ಧಮಾಕ- ‘ಘಾಟಿ’ ಚಿತ್ರದ ಫಸ್ಟ್ ಲುಕ್ ಔಟ್
ರೈತರ ಹೋರಾಟಕ್ಕೆ ಮಣಿದು ಮನೆಯಿಂದ ಹೊರಗೆ ಬಂದ ಸಚಿವ ಮುನಿಯಪ್ಪ ರೈತರ ಮನವೊಲಿಕೆ ಮಾಡಿದರು. ನೋಟಿಸ್ ಕೊಟ್ಟಿರುವುದು ನನ್ನ ಗಮನಕ್ಕೆ ಬಂದಿಲ್ಲ. ಕೂಡಲೇ ನೋಟಿಸ್ ವಾಪಸ್ ಪಡೆಯುತ್ತೇನೆ. ಈ ತಿಂಗಳ ಅಂತ್ಯದ ಒಳಗೆ ಸಮಸ್ಯೆ ಬಗೆಹರಿಸುತ್ತೇವೆ. ಅಲ್ಲಿಯವರೆಗೂ ಯಾವುದೇ ಪ್ರಕ್ರಿಯೆ ನಡೆಸುವುದಿಲ್ಲ ಎಂದು ಭರವಸೆ ನೀಡಿದರು.
ಸಚಿವರ ಭರವಸೆಗೆ ಒಪ್ಪದ ರೈತರು ಲಿಖಿತ ರೂಪದಲ್ಲಿ ಭರವಸೆ ಕೊಡಬೇಕು ಎಂದು ಆಗ್ರಹಿಸಿ ಧರಣಿ ಮುಂದುವರೆಸಿದರು. ಬಳಿಕ ಕೆಐಎಡಿಬಿ ಅಧಿಕಾರಿಗಳು ಕೊಟ್ಟಿರುವ ನೋಟಿಸ್ ವಾಪಸ್ ಪಡೆದಿರುವುದಾಗಿ ಲಿಖಿತ ರೂಪದಲ್ಲಿ ರೈತರಿಗೆ ಭರವಸೆ ನೀಡಿದರು.ಇದನ್ನೂ ಓದಿ: ಪಿಜಿಸಿಇಟಿ ಆಪ್ಷನ್ ದಾಖಲಿಸಲು ನ.8 ಕೊನೆ ದಿನ – ಕೆಇಎ