ಮಡಿಕೇರಿ: ಕೊರೊನಾ ನಿಯಂತ್ರಿಸಲು ಸರ್ಕಾರ ಲಾಕ್ಡೌನ್ ಘೋಷಿಸಿದೆ. ಆದರೆ ದೇಶದಲ್ಲಿ ಆಹಾರ ಸಮಸ್ಯೆ ಎದುರಾಗಬಾರದು ಎಂಬ ಕಾರಣಕ್ಕೆ ರೈತರಿಗೆ ಕೃಷಿ ಮಾಡಲು ವಿನಾಯಿತಿ ನೀಡಲಾಗಿದೆ. ಆದರೆ ಕೆಲವೆಡೆ ಪೊಲೀಸರು ರೈತರು ಬೆಳೆದ ತರಕಾರಿಯನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋಗಲು ಬಿಡದೆ ಸಮಸ್ಯೆ ಮಾಡುತ್ತಿರುವ ಘಟನೆಗಳು ಬೆಳಕಿಗೆ ಬರುತ್ತಿವೆ.
ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಆನೆಚೌಕೂರಿನ ಚೆಕ್ಪೋಸ್ಟ್ ಇಂತಹ ಘಟನೆ ನಡೆದಿದ್ದು, ಚೆಕ್ಪೋಸ್ಟ್ ನಲ್ಲಿದ್ದ ಎಎಸ್ಐ ಒಬ್ಬರು ರೈತರು ಬೆಳೆ ಸಾಗಿಸಲು ಬಿಡದೆ ತಡೆ ಹಿಡಿದಿದ್ದಾರೆ. ರೈತರು ಮೊದಲೇ ಪಾಸ್ ಪಡೆದು ಬೆಳೆಯನ್ನು ಸಾಗಾಟ ಮಾಡುತ್ತಿದ್ದರು. ಪಾಸ್ ತಮ್ಮ ಬಳಿ ಪಾಸ್ ಇರುವುದನ್ನು ತೋರಿಸಿದರು ಕೂಡ ಸಮಸ್ಯೆ ಮಾಡಿದ್ದಾರೆ.
ಪೊಲೀಸರ ಕ್ರಮದಿಂದ ಬೇಸತ್ತ ರೈತರು ರಾಜ್ಯ ರೈತ ಸಂಘದ ಮುಖಂಡರ ಜೊತೆ ಸೇರಿ ಸ್ಥಳದಲ್ಲೇ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೈತರು ನಿಯಮಗಳ ಅನುಸಾರ ಹೋಗಲು ಅನುಮತಿ ಇದ್ದರೂ ಬಿಡದ ಪೊಲೀಸರನ್ನು ಸ್ಥಳದಲ್ಲೇ ಪ್ರಶ್ನೆ ಮಾಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು ರೈತರಿಂದ ಮಾಹಿತಿ ಪಡೆದರು. ಆ ಬಳಿಕ ರೈತರನ್ನು ಸಮಾಧಾನ ಪಡಿಸಿ ಮತ್ತೊಮ್ಮೆ ಇಂತಹ ತಪ್ಪು ಆಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿ ರೈತರನ್ನು ಕಳುಹಿಸಿದ್ದಾರೆ.