ದಾವಣೆಗೆರೆ: ಕಾಡು ಪ್ರಾಣಿಗಳಿಗಾಗಿ ಇಡುವ ನಾಡ ಬಾಂಬ್ನಿಂದಾಗಿ ಗ್ರಾಮದ ರೈತರು ಜಮೀನುಗಳಿಗೆ ಹೋಗಲು ಭಯಪಡುವ ವಾತಾವರಣ ನಿರ್ಮಾಣವಾಗಿದೆ.
ಬಳ್ಳಾರಿ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ಕಡತಿ ಗ್ರಾಮದ ರೈತರು ಪ್ರತಿ ದಿನ ಆತಂಕದಲ್ಲಿ ಜೀವನ ಸಾಗಿಸುತ್ತಿದ್ದು, ತುಂಗಭದ್ರ ನದಿಗೆ ಹೊಂದಿಕೊಂಡಿರುವ ಈ ಗ್ರಾಮದಲ್ಲಿ ಕಬ್ಬು, ಭತ್ತ, ಜೋಳ ಸೇರಿದಂತೆ ವಿವಿಧ ಬೆಳೆಗಳನ್ನ ಬೆಳೆಯುತ್ತಾರೆ. ಕಾಡು ಪ್ರಾಣಿಗಳಿಂದ ಬೆಳೆಗಳನ್ನು ಉಳಿಸಿಕೊಳ್ಳಲು ಹಾಗೂ ಕಾಡು ಪ್ರಾಣಿಗಳನ್ನು ಬೇಟೆಯಾಡಲು ನಾಡ ಬಾಂಬ್ ಗಳ ಮೊರೆ ಹೋಗಿದ್ದಾರೆ.
ಹೀಗೆ ಕಾಡು ಪ್ರಾಣಿಗಳ ಕಾಟವನ್ನು ತಪ್ಪಿಸಲು ಇಟ್ಟಿದ್ದ ನಾಡ ಬಾಂಬ್ಗಳು ಗ್ರಾಮಸ್ಥರಿಗೆ ಮುಳುವಾಗಿವೆ. ನಾಡ ಬಾಂಬ್ ತಿಂದು ಎರಡು ನಾಯಿಗಳು ಸಾವನ್ನಪ್ಪಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ರೈತರು ರಾತ್ರಿ ವೇಳೆ ಬೆಳೆಗೆ ನೀರು ಹಾಯಿಸಲು ಹೋಗುತ್ತಿದ್ದರು. ಇದೀಗ ನಾಡ ಬಾಂಬ್ ನಿಂದ ಹೊಲಕ್ಕೆ ಹೋಗಲು ಭಯಪಡುವಂತಾಗಿದೆ.
ಕೆಲ ರೈತರು ಬೆಳೆಗಳನ್ನು ರಕ್ಷಿಸಿಕೊಳ್ಳಲು ನಾಡ ಬಾಂಬ್ ಬಳಸುತ್ತಾರೆ, ಇನ್ನೂ ಕೆಲವರು ಕಾಡು ಪ್ರಾಣಿಗಳನ್ನು ಭೇಟಿಯಾಡಲು ನಾಡ ಬಾಂಬ್ ಬಳಸುತ್ತಾರೆ. ಬಾಂಬ್ಗಳನ್ನು ಮಾಂಸದುಂಡೆಯೊಳಗೆ ಇರುವುದರಿಂದ ಕಾಡು ಪ್ರಾಣಿಗಳ ಬದಲಾಗಿ ಸಾಕು ನಾಯಿಗಳು ಸಾಯುತ್ತಿದ್ದು ಗ್ರಾಮಸ್ಥರನ್ನು ಚಿಂತೆಗೀಡು ಮಾಡಿದೆ. ನಾಯಿಗಳು ಸಾವನ್ನಪ್ಪಿದರೆ ಸರಿ ಆದರೆ ಮಕ್ಕಳು ಇದನ್ನು ತುಳಿದರೆ ಏನು ಕಥೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.