ವಿಜಯಪುರ: ಬರ ಬಂದ್ರೆ ಸಾಕು ಸಾಮಾನ್ಯವಾಗಿ ಎಲ್ಲ ರೈತರು ಬೆಚ್ಚಿ ಬೀಳ್ತಾರೆ. ಆದರೆ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಬೇನಾಳ ಗ್ರಾಮದ ರೈತರು ಮಾತ್ರ ಆಲಮಟ್ಟಿ ಜಲಾಶಯದ ಹಿನ್ನೀರಿನ ಜಲಾಯನ ಪ್ರದೇಶದಲ್ಲಿ ಬಂಗಾರ ಬೆಳೆ ಬೆಳೆಯುತ್ತಾರೆ.
ಜಿಲ್ಲೆಯಾದ್ಯಂತ ಭೀಕರ ಬರದಿಂದ ನಲುಗಿ ಹೋಗಿದೆ. ಆದರೆ ಈ ಗ್ರಾಮದ ಗ್ರಾಮಸ್ಥರು ಮಾತ್ರ ಅದನ್ನೇ ಬಂಡವಾಳ ಮಾಡಿಕೊಂಡು ಲಾಭದ ಬೆಳೆ ಬೆಳೆದಿದ್ದಾರೆ. ಈ ಬಾರಿ ಅವಧಿ ಮುನ್ನವೇ ಆಲಮಟ್ಟಿ ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಖಾಲಿಯಾದ ಜಲಾನಯನ ಪ್ರದೇಶದಲ್ಲಿ ಜೋಳ, ಮೆಕ್ಕೆ ಜೋಳ, ಶೇಂಗಾ ಹಾಗು ವಿವಿಧ ತರಕಾರಿಗಳನ್ನು ಬೆಳೆದಿದ್ದು, ಇಲ್ಲಿಯ ಜಮೀನುಗಳು ಮಾತ್ರ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿವೆ.
ನಮ್ಮ ಸಾಕಷ್ಟು ಜಮೀನುಗಳು ಮುಳುಗಡೆಯಾಗಿದ್ದು, ಅವುಗಳು ಬೇಸಿಗೆಯಲ್ಲಿ ಜಲಾಶಯದ ನೀರು ಹಿಂದೆ ಸರಿಯುವುದರಿಂದ ನಮ್ಮ ಜಮೀನುಗಳು ಖಾಲಿಯಾಗುತ್ತವೆ. ಹಾಗಾಗಿ ನಾವು ಜಮೀನುಗಳಲ್ಲಿ ಅಲ್ಪಾವಧಿಯ ಬೆಳೆಗಳನ್ನು ಬೆಳೆಯುತ್ತಿವೆ. ಈ ಭಾರೀ ಬರಗಾಲವಿದ್ದು, ಹಿನ್ನೀರಿನ ಖಾಲಿ ಪ್ರದೇಶ ತೇವಾಂಶದಿಂದ ಕೂಡಿದ್ದು ಅಲ್ಲಿ ಬೆಳೆಗಳನ್ನೂ ಬೆಳೆದು ಕೊಳ್ಳುತ್ತೇವೆ ಎಂದು ರೈತ ರಾಜು ಹೇಳಿದ್ದಾರೆ.
ಇನ್ನೂ ಈ ಗ್ರಾಮದಲ್ಲಿ ಕುಡಿಯಲು ನೀರು ಸಹ ಇಲ್ಲ. ಸರ್ಕಾರದಿಂದ ಅಲ್ಲಲ್ಲಿ ಬೋರವೆಲ್ಗಳನ್ನು ಕೊರೆದ್ರೂ ಪ್ರಯೋಜನವಾಗಿಲ್ಲ. ಆಲಮಟ್ಟಿ ಜಲಾಶಯದ ಮಡಿಲಿನಲ್ಲಿರುವ ಗ್ರಾಮದಲ್ಲಿ ಮಾತ್ರ ಕುಡಿಯುವ ನೀರಿನ ತೊಂದರೆ ಮಾತ್ರ ತಪ್ಪಿಲ್ಲ ಎಂದು ಗ್ರಾಮಸ್ಥರು ಹೇಳುತ್ತಾರೆ.