ಕೋಲಾರ: ಮುಳಬಾಗಿಲು ಪಕ್ಷೇತರ ಶಾಸಕ ಎಚ್.ನಾಗೇಶ್ ವಿರುದ್ಧ ಕ್ಷೇತ್ರದ ಜನರು ರೊಚ್ಚಿಗೆದ್ದಿದ್ದು, ಶಾಸಕರ ಫೋಟೋಗೆ ಚಪ್ಪಲಿಯಿಂದ ಹೊಡೆದು ಹಣವನ್ನು ಚೆಲ್ಲಿ ವಿಚಿತ್ರವಾಗಿ ಪ್ರತಿಭಟನೆ ಮಾಡಿದ್ದಾರೆ.
ಅಧಿಕಾರದ ಆಸೆಗೆ ಹಣ ಪಡೆದು ಶಾಸಕ ಸ್ಥಾನ ಮಾರಿಕೊಂಡಿದ್ದಾರೆ ಎಂದು ಶಾಸಕ ನಾಗೇಶ್ ವಿರುದ್ಧ ಆರೋಪಿಸಿ, ಶಾಸಕರ ಪ್ರತಿಕೃತಿ ಮಾಡಿ ಅದನ್ನು ಚಟ್ಟದ ಮೇಲೆ ಮಲಗಿಸಿ ಕ್ಷೇತ್ರದಲ್ಲಿ ಮೆರವಣಿಗೆ ಮಾಡಿ ಯುವಕರು, ರೈತರು ಆಕ್ರೋಶ ವ್ಯಕ್ತಪಡಿಸಿದರು.
ಶಾಸಕರ ಫೋಟೋಗಳಿಗೆ ಚಪ್ಪಲಿಗಳಿಂದ ಹೊಡೆದು, ರಸ್ತೆ ಮಧ್ಯೆ ಫೋಟೋಗಳ ಮೇಲೆ ಹಣ ಚೆಲ್ಲಿ, ಶಾಸಕರ ವಿರುದ್ಧ ಘೋಷಣೆಯನ್ನು ಕೂಗಿದ್ದಾರೆ. ನಾವು ಕೆಲಸ ಮಾಡಲಿ ಎಂದು ವೋಟ್ ಹಾಕಿ ನಾಗೇಶ್ ಅವರನ್ನು ಶಾಸಕರಾಗಿ ಮಾಡಿದ್ದೇವೆ. ಆದರೆ ಅವರು ತಮ್ಮ ಸ್ವಾರ್ಥಕ್ಕೆ ನಮ್ಮ ನಂಬಿಕೆ ಬಳಿಸಿಕೊಂಡಿದ್ದಾರೆ. ಹಣಕ್ಕಾಗಿ ಜನ ನೀಡಿದ ಶಾಸಕ ಸ್ಥಾನ ಮಾರಿಕೊಂಡಿದ್ದಾರೆ ಎಂದು ಜನರು ಆರೋಪಿಸಿದ್ದಾರೆ.