ರಾಯಚೂರು: ಅಳುತ್ತಾ ಕುಳಿತರೆ ಆಗಲ್ಲ. ಇಲ್ಲಿ ಕೆಲಸ ಮಾಡಬೇಕು. ಕೇವಲ ಭಾವನಾತ್ಮಕತೆಯಿಂದ ರಾಜ್ಯ ಉದ್ಧಾರವಾಗಲ್ಲ ಅಂತ ರಾಜ್ಯರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲೀಪಾಟೀಲ್ ಅವರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಚಾಟಿ ಬೀಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಸಂಪೂರ್ಣ ಸಾಲಮನ್ನಾ ಮಾಡಲು ಆಗದಿದ್ದರೆ ಕುರ್ಚಿಯಿಂದ ಕೆಳಗೆ ಇಳಿಯಿರಿ. ಆದ್ರೆ ಬೇಜವಾಬ್ದಾರಿತನದ ಹೇಳಿಕೆ ನೀಡಬೇಡಿ ಅಂತ ಎಚ್ಚರಿಕೆ ನೀಡಿದ್ರು. ರೈತರಿಗೆ ಸಾಲಮನ್ನಾ ಕೇಳಲು ನೈತಿಕತೆಯಿಲ್ಲ ಅಂತ ಜಾತಿ ವ್ಯಾಮೋಹಕ್ಕೆ ಮತಹಾಕಿದ್ದಾರೆ ಎಂದಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಚುನಾವಣಾ ಪೂರ್ವದಲ್ಲಿ ಸಂಪೂರ್ಣ ಸಾಲಮನ್ನಾ ಮಾಡುವುದಾಗಿ ಹೇಳಿ, 2 ಲಕ್ಷ ಮನ್ನಾ ಮಾಡಿದ ನಿಮಗೆ ಯಾವ ನೈತಿಕತೆಯಿದೆ. ರೈತರ ಬಗ್ಗೆ ಹಗುರವಾಗಿ ಮಾತನಾಡಬೇಡಿ. ಅಳುತ್ತಾ ಕುಳಿತರೆ ಏನೂ ಆಗಲ್ಲ. ಇಲ್ಲಿ ಕೆಲಸ ಮಾಡಿ ತೋರಿಸಬೇಕು. ಕೇವಲ ಭಾವನಾತ್ಮಕತೆಯಿಂದ ರಾಜ್ಯದ ಜನರ ಉದ್ಧಾರವಾಗುವುದಿಲ್ಲ ಅಂದ್ರು.
ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತು ಬೇಜವಾಬ್ದಾರಿ ಹೇಳಿಕೆಗಳನ್ನ ನೀಡಬೇಡಿ ಅಂತ ಚಾಮರಸ ಮಾಲೀಪಾಟೀಲ್ ಅವರು ಇದೇ ಸಂದರ್ಭದಲ್ಲಿ ಸಿಎಂ ಅವರನ್ನು ಎಚ್ಚರಿಸಿದ್ದಾರೆ.