ಗುಡ್ಡಕ್ಕೆ ಆಕಸ್ಮಿಕ ಬೆಂಕಿ – ಅಂಗವಿಕಲ ರೈತ ಸಜೀವ ದಹನ

Public TV
1 Min Read
dvg farmer hill

ದಾವಣಗೆರೆ: ಗುಡ್ಡದಲ್ಲಿ ದನಗಳ ಮೇಯಿಸಲು ಹೋಗಿದ್ದ ರೈತರೊಬ್ಬರು ಗುಡ್ಡಕ್ಕೆ ಬಿದ್ದಿದ್ದ ಆಕಸ್ಮಿಕ ಬೆಂಕಿಯಲ್ಲಿ ಸಿಲುಕಿ ಸಜೀವ ದಹನವಾಗಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಬಸವಾಪಟ್ಟಣದಲ್ಲಿ ನಡೆದಿದೆ.

ಕಂಚುಗಾರಹಳ್ಳಿ ಗ್ರಾಮದ ಮಾತು ಬಾರದ ಹಾಗೂ ಅಂಗವಿಕಲ ರೈತ ಚಂದ್ರಪ್ಪ(55) ಮೃತ ದುರ್ದೈವಿ. ದನಗಳ ಮೇಯಿಸಲು ಗುಡ್ಡಕ್ಕೆ ಹೋದಾಗ ಬೆಂಕಿ ತಗುಲಿ ರೈತ ಸಾವನ್ನಪ್ಪಿದ್ದಾರೆ. ಪ್ರತಿದಿನ ಚಂದ್ರಪ್ಪ ದನಗಳನ್ನು ಮೇಯಿಸಲು ಗುಡ್ಡಕ್ಕೆ ಹೋಗುತ್ತಿದ್ದರು. ಎಂದಿನಂತೆ ಸೋಮವಾರ ಕೂಡ ಚಂದ್ರಪ್ಪ ದನಗಳನ್ನು ಮೇಯಿಸಲು ಗುಡ್ಡಕ್ಕೆ ಹೋಗಿದ್ದರು. ಆದರೆ ಇದೇ ವೇಳೆ ಗುಡಕ್ಕೆ ಬೆಂಕಿ ಬಿದ್ದಿದ್ದು, ಸುತ್ತ ಮುತ್ತಲು ಯಾರು ಇಲ್ಲದ ಕಾರಣ ಹಾಗೂ ಮೂಕನಾಗಿರುವುದರಿಂದ ಕೂಗಲು ಆಗದೆ ರೈತ ಬೆಂಕಿಗೆ ಬಲಿಯಾಗಿದ್ದಾರೆ.

dvg farmer hill 1

ಇದೇ ಸಮಯದಲ್ಲಿ ಜಮೀನು ನೋಡುವುದಕ್ಕೆ ಹೋಗುತ್ತಿದ್ದ ಸ್ಥಳೀಯರು ಬೆಂಕಿಯಲ್ಲಿ ರೈತ ಚಂದ್ರಪ್ಪನ ಮೂಕ ವೇದನೆಯ ಕಿರುಚಾಟ ಗಮನಿಸಿದ್ದಾರೆ. ನಂತರ ಸ್ಥಳೀಯರು ಬಂದು ಬೆಂಕಿಯಲ್ಲಿ ಸುಟ್ಟು ಇನ್ನೂ ಸ್ವಲ್ಪ ಉಸಿರಾಡುತ್ತಿದ್ದ ಚಂದ್ರಪ್ಪರನ್ನು ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗಿದೇ ರೈತ ಆಸ್ಪತ್ರೆಯಲ್ಲಿಯೇ ಸಾವನ್ನಪ್ಪಿದ್ದಾರೆ.

dvg farmer hill 2

ದಾವಣಗೆರೆ ಜಿಲ್ಲೆಯ ಸೂಳೆಕೆರೆ ಗುಡ್ಡ, ಬಸವಾಪಟ್ಟಣ ದುರ್ಗನಗುಡ್ಡ, ದಾಗಿನಕಟ್ಟೆ ಚಿಕ್ಕುಡದಮ್ಮನ ಗುಡ್ಡ, ಮರಬನಹಳ್ಳಿ ಬಸವನಗುಡ್ಡಗಳಲ್ಲಿ ಕಾಡಿಚ್ಚು ಮತ್ತು ಕೆಲ ಕಿಡಿಗೇಡಿಗಳು ಬೀಡಿ, ಸಿಗರೇಟ್ ಸೇದಿ ಪೊದೆ, ಬಳ್ಳಿ ಗಿಡಗಳ ಮೇಲೆ ಎಸೆಯುವುದರಿಂದ ಕಾಡು ನಾಶವಾಗುತ್ತಿದೆ. ಜೊತೆಗೆ ವನ್ಯ ಜೀವ ಸಂಕುಲ ನಾಶವಾಗುತ್ತಿದೆ. ಹೀಗೆ ಹೊತ್ತಿಕೊಂಡ ಬೆಂಕಿ ಇದೀಗ ಚಂದ್ರಪ್ಪರನ್ನು ಬಳಿ ಪಡೆದಿದ್ದು, ತಪ್ಪಿತಸ್ಥರನ್ನು ಸೆರೆ ಹಿಡಿಯಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಸ್ಥಳಕ್ಕೆ ಡಿವೈಎಸ್‌ಪಿ ಪ್ರಶಾಂತ್ ಮನುಗೋಳಿ, ವೃತ್ತ ನಿರೀಕ್ಷಕ ಆರ್. ಆರ್ ಪಟೇಲ್ ಭೇಟಿ ನೀಡಿ ಪರಿಶೀಲಿಸಿದ್ದು, ಈ ಸಂಬಂಧ ಬಸವಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *