ಚಿಕ್ಕಮಗಳೂರು: ಭಾರೀ ಮಳೆಯಿಂದ ಪ್ರವಾಹ ಉಂಟಾಗಿ ಮನೆ ಹಾಗೂ ತೋಟದ ಜಮೀನು ಕಳೆದುಕೊಂಡಿದ್ದ ರೈತರೊಬ್ಬರು ನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೂಡಿಗೆರೆ ತಾಲೂಕಿನ ಕಳಸ ಬಳಿಯ ಕಾರ್ಗದ್ದೆ ಗ್ರಾಮದಲ್ಲಿ ನಡೆದಿದೆ.
ಚನ್ನಪ್ಪಗೌಡ (65) ಆತ್ಮಹತ್ಯೆ ಮಾಡಿಕೊಂಡಿರುವ ರೈತರಾಗಿದ್ದು, ಎದೆಗೆ ಬಂದೂಕಿನಿಂದ ಗುಂಡು ಹಾರಿಸಿಕೊಂಡು ತೋಟದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮೃತ ರೈತ ಚನ್ನಪ್ಪಗೌಡ ಅವರು 5 ಎಕರೆ ಜಮೀನು ಹೊಂದಿದ್ದಾರೆ. ಕಳೆದ ಬಾರಿ ಮಳೆಯಿಂದ ಉಂಟಾಗಿದ್ದ ನೆರೆಯಿಂದ ಗುಡ್ಡ ಕುಸಿತ ಸಂಭವಿಸಿ ಮನೆ ಹಾಗೂ ತೋಟ ಬಹುತೇಕ ನಾಶವಾಗಿತ್ತು. ಇದರಿಂದ ಅವರು ಸಮಸ್ಯೆಗೆ ಸಿಲುಕಿದ್ದರು. ಗುಡ್ಡ ಕುಸಿತದಿಂದ ಸಂಭವಿಸಿದ ಪರಿಣಾಮ ತೋಟ ನಾಶವಾಗಿದ್ದ ಕುರಿತು ಮಾಹಿತಿ ನೀಡಿ ಸರ್ಕಾರದಿಂದ ನೆರವು ನಿರೀಕ್ಷೆ ಮಾಡಿದ್ದರು. ಆದರೆ ನಾಶವಾಗಿದ್ದ ತೋಟಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದ ಅಧಿಕಾರಿಗಳು ವರದಿ ನೀಡಿದ್ದರು ಎಂಬ ಮಾಹಿತಿ ಲಭಿಸಿದೆ. ಆದರೆ ಸರ್ಕಾರದಿಂದ ಯಾವುದೇ ಪರಿಹಾರ ಲಭ್ಯವಾಗದ ಕಾರಣ ಮನನೊಂದ ಚನ್ನಪ್ಪಗೌಡ ಅವರು ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.