ಮಂಡ್ಯ: ನಕಲಿ ದಾಖಲೆ ಸೃಷ್ಟಿಸಿ ತನ್ನ ಜಮೀನನ್ನು ಹಣವಂತರು ಕಿತ್ತುಕೊಳ್ಳಲು ಯತ್ನಿಸಿದ್ದಾರೆ ಎಂದು ಆರೋಪಿಸಿ ರೈತರೊಬ್ಬರು ಟವರ್ ಏರಿ ಕುಳಿತು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ ಘಟನೆ ಮಂಡ್ಯ ನಗರದಲ್ಲಿ ನಡೆದಿದೆ.
ಉಪ್ಪರಕನಹಳ್ಳಿ ಗ್ರಾಮದ ಕೃಷ್ಣ ಎಂಬ ರೈತ ನಗರದ ಸಂಜಯ ವೃತ್ತದಲ್ಲಿರುವ ಟವರ್ ಏರಿ ಕುಳಿತು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದಾರೆ. ತನ್ನ ಜಮೀನಿನ ಎದುರುಬದಿಯಲ್ಲಿ ಇರುವವರು ಹಣವಂತರಾಗಿದ್ದಾರೆ. ಅವರು ನಕಲಿ ದಾಖಲೆ ಸೃಷ್ಟಿಸಿ ತನ್ನ ಜಮೀನು ಲಪಟಾಯಿಸಲು ಹೊರಟಿದ್ದಾರೆ. ಈ ಬಗ್ಗೆ ತಹಶಿಲ್ದಾರ್ ಸೇರಿದಂತೆ ಹಲವರಿಗೆ ಮನವಿ ಪತ್ರ ಕೊಟ್ಟಿದ್ದೇನೆ. ಕಚೇರಿಗೆ ದಿನನಿತ್ಯ ಅಲೆದರೂ ಸಮಸ್ಯೆ ಮಾತ್ರ ಇತ್ಯರ್ಥವಾಗುತ್ತಿಲ್ಲ. 40 ವರ್ಷದಿಂದ ವ್ಯವಸಾಯ ಮಾಡುತ್ತಿರುವ ಜಮೀನನ್ನು ಕಳೆದುಕೊಳ್ಳುವ ಬದಲು ಆತ್ಮಹತ್ಯೆಗೆ ಶರಣಾಗುವುದೇ ಮೇಲು ಎಂದು ರೈತ ಕೃಷ್ಣ ಅಸಹಾಯಕತೆ ಹೊರಹಾಕುತ್ತ ಟವರ್ ಮೇಲೆ ಕುಳಿತಿದ್ದಾರೆ.
ಸಮಸ್ಯೆ ಬಗೆಹರಿಸೋದಾಗಿ ಹೇಳಿ ಕೃಷ್ಣನನ್ನು ಕೆಳಗಿಳಿಸಲು ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ, ಜನಪ್ರತಿನಿಧಿಗಳು ಸೇರಿದಂತೆ ಹಲವರು ಹರಸಾಹಸಪಟ್ಟರುಸ. ಸತತ ಒಂದೂವರೆ ಗಂಟೆಗಳ ಕಾಲ ಮನವೊಲಿಸಿದ ನಂತರ ರೈತ ಕೃಷ್ಣ ಟವರ್ ನಿಂದ ಕೆಳಗಿಳಿದಿದ್ದಾರೆ. ಇದ್ರಿಂದಾಗಿ ಸ್ಥಳದಲ್ಲಿ ನಿರ್ಮಾಣವಾಗಿದ್ದ ಆತಂಕದ ವಾತಾವರಣ ತಿಳಿಯಾದಂತಾಗಿದೆ.