ಟ್ವೀಟ್ ಮಾಡಿ ವಿಲನ್‍ಗಳಾದ ಯುವಿ, ಭಜ್ಜಿ – ಯುವರಾಜ್ ಸಿಂಗ್ ಸ್ಪಷ್ಟನೆ

Public TV
3 Min Read
Yuvaraj Singh

ಮುಂಬೈ: ಟೀಂ ಇಂಡಿಯಾ ಮಾಜಿ ಆಟಗಾರ ಯುವರಾಜ್ ಸಿಂಗ್ ಹಾಗೂ ಹರ್ಭಜನ್ ಸಿಂಗ್ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಟೀಕೆ ಮಾಡಿ ಟ್ರೋಲ್ ಮಾಡುತ್ತಿದ್ದಾರೆ. ಪಾಕಿಸ್ತಾನದಲ್ಲಿ ಕೊರೊನಾ ನಿಯಂತ್ರಣ ಮಾಡಲು ಪಾಕ್ ಮಾಜಿ ಕ್ರಿಕೆಟಿಗ ಆಫ್ರಿದಿ ಅವರ ಫೌಂಡೇಶನ್‍ಗೆ ಸಹಾಯ ಮಾಡುವಂತೆ ಯುವರಾಜ್ ಸಿಂಗ್ ಮನವಿ ಮಾಡಿಕೊಂಡ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ.

ಭಾರತದಲ್ಲಿ ಕೊರೊನಾ ನಿಯಂತ್ರಣಕ್ಕೆ ಸಹಾಯ ಮಾಡಲು ಆಟಗಾರರು ಮನವಿ ಮಾಡಿಬೇಕಾಗಿತ್ತು. ಆದರೆ ಪಾಕ್‍ನಲ್ಲಿರೋ ಮಂದಿಗೆ ಸಹಾಯ ಮಾಡುವಂತೆ ಮನವಿ ಮಾಡಿರುವುದು ಎಷ್ಟು ಸರಿ ಎಂಬುವುದು ನೆಟ್ಟಿಗರ ಪ್ರಶ್ನೆಯಾಗಿದೆ. ಇತ್ತ ಯುವರಾಜ್‍ಸಿಂಗ್ ದಾರಿಯನ್ನೇ ಅನುಸರಿಸಿರೋ ಹರ್ಭಜನ್ ಸಿಂಗ್ ವಿರುದ್ಧವೂ ನೆಟ್ಟಿಗರು ಗರಂ ಆಗಿದ್ದಾರೆ. ಟ್ವಿಟ್ಟರ್ ನಲ್ಲಿ #shameonyuvibhajji ಎಂಬ ಹ್ಯಾಶ್ ಟ್ಯಾಗ್ ಬಳಸಿ 50 ಸಾವಿರಕ್ಕೂ ಹೆಚ್ಚು ಟ್ವೀಟ್‍ಗಳೊಂದಿಗೆ ಟ್ರೆಂಡ್ ಆಗಿತ್ತು.

ಇತ್ತ ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳು ಕೇಳಿ ಬರುತ್ತಿದಂತೆ ಪ್ರತಿಕ್ರಿಯೆ ನೀಡರೋ ಯುವರಾಜ್ ಸಿಂಗ್, ಎಲ್ಲವುದಕ್ಕಿಂತ ಮಾನವೀಯತೆ ದೊಡ್ಡದು ಎಂದು ಹೇಳಿ ತಮ್ಮ ಈ ಹಿಂದಿನ ಮನವಿಯನ್ನು ಸಮರ್ಥಿಸಿಕೊಂಡಿದ್ದಾರೆ. ತಮ್ಮ ಸಾಮಾಜಿಕ ಕಾರ್ಯಕ್ಕೆ ಬೆಂಬಲವಾಗಿ ನಿಂತಿದ್ದ ಯುವರಾಜ್ ಸಿಂಗ್ ಹಾಗೂ ಹರ್ಭಜನ್ ಸಿಂಗ್ ಅವರಿಗೆ ಅಫ್ರಿದಿ ಧನ್ಯವಾದ ತಿಳಿಸಿದ್ದಾರೆ. ಅಲ್ಲದೇ ಮಾನವೀಯತೆ ದೃಷ್ಟಿಯಿಂದ ದೇಶ ಗಡಿಯನ್ನು ಮೀರಿದ ನಿಮ್ಮ ಬೆಂಬಲ, ಪ್ರೀತಿ ಮತ್ತು ಶಾಂತಿಯನ್ನು ವ್ಯಕ್ತಪಡಿಸುತ್ತದೆ ಎಂದಿದ್ದಾರೆ.

ಭಾರತದಲ್ಲಿ ಕೊರೊನಾ ನಿಯಂತ್ರಣಕ್ಕೆ ಟೀಂ ಇಂಡಿಯಾ ಕ್ರಿಕೆಟಿಗರಾದ ರೋಹಿತ್ ಶರ್ಮಾ 80 ಲಕ್ಷ ರೂ., ಸುರೇಶ್ ರೈನಾ 52 ಲಕ್ಷ ರೂ., ರಹಾನೆ 10 ಲಕ್ಷ ರೂ., ಕೊಹ್ಲಿ-ಅನುಷ್ಕಾ ಜೋಡಿ 3 ಕೋಟಿ ರೂ., ಸಚಿನ್ 50 ಲಕ್ಷ ರೂ. ದೇಣಿಗೆ ನೀಡಿದ್ದರು. ಪರಿಣಾಮ ಯುವರಾಜ್ ಸಿಂಗ್, ಹರ್ಭಜನ್ ಸಿಂಗ್ ಅವರ ನಿಲುವಿನ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಕೆಲ ನೆಟ್ಟಿಗರು, ಪಾಕಿಸ್ತಾನ ಸರ್ಕಾರ, ಎನ್‍ಜಿಓಗಳು ಅಲ್ಲಿನ ಹಿಂದೂ, ಕ್ರೈಸ್ತ ಮಂದಿಗೆ ಕೊರೊನಾದಂತಹ ಸಂದರ್ಭದಲ್ಲೂ ಆಹಾರ ಪೂರೈಕೆ ಮಾಡಲು ನಿರಾಕರಿಸಿದೆ. ಅಲ್ಲದೇ ಭಾರತದಿಂದ ಭೂ ಗಡಿ ಪ್ರದೇಶದ ಮೂಲಕ ಆಹಾರವನ್ನು ಪೂರೈಕೆ ಮಾಡಿಸಿಕೊಳ್ಳುವಂತೆ ಸೂಚನೆ ನೀಡಿ ನಿರ್ಲಕ್ಷ್ಯ ತೋರಿದೆ. ಇದುವರೆಗೂ ಈ ಬಗ್ಗೆ ಅಫ್ರಿದಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಲ್ಲಿನ ಜನತೆಯ ಬಗ್ಗೆ ಧ್ವನಿಯನ್ನು ನೀಡಿಲ್ಲ. ಇಂತಹ ಸಂದರ್ಭದಲ್ಲಿ ಯುವಿ, ಬಜ್ಜಿ ಅವರು ಅಫ್ರಿದಿಗೆ ಬೆಂಬಲ ನೀಡಿರೋದು ಎಷ್ಟು ಸರಿ ಎಂಬುವುದು ಹಲವರ ಪ್ರಶ್ನೆಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *