ಹಾವೇರಿ: ರಾಣೇಬೆನ್ನೂರು ಉಪಚುನಾವಣೆ ಹಿನ್ನೆಲೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತಬೇಟೆಗೆ ಇಳಿದಿದ್ದು, ಅಭಿಮಾನಿಗಳು ಬರೋಬ್ಬರಿ 500 ಕೆ.ಜಿ ತೂಕದ ಸೇಬುಹಣ್ಣಿನ ಹಾರವನ್ನು ಹಾಕಿ ತಮ್ಮ ನೆಚ್ಚಿನ ನಾಯಕನಿಗೆ ಸ್ವಾಗತ ಕೋರಿದ್ದಾರೆ.
ಉಪಚುನಾವಣೆ ಹಿನ್ನೆಲೆ ಎಲ್ಲೆಡೆ ಭರ್ಜರಿ ಪ್ರಚಾರ ನಡೆಸುತ್ತಿರುವ ಸಿದ್ದರಾಮಯ್ಯ ಅವರು ಇಂದು ರಾಣೆಬೆನ್ನೂರಿನಲ್ಲಿ ಮತಬೇಟೆ ನಡೆಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಕೋಳಿವಾಡ ಪರ ಸಿದ್ದರಾಮಯ್ಯ ಮತಯಾಚನೆ ಮಾಡಿದ್ದಾರೆ. ರಾಣೇಬೆನ್ನೂರು ತಾಲೂಕು ಕವಲತ್ತು ಗ್ರಾಮದಲ್ಲಿ ಕೆ.ಬಿ ಕೋಳಿವಾಡ ಜೊತೆಗೆ ಸಿದ್ದರಾಮಯ್ಯ ರೋಡ್ ಶೋ ಮಾಡಿದ್ದು, ಈ ವೇಳೆ ಅಭಿಮಾನಿಗಳು ಸಿದ್ದರಾಮಯ್ಯ ಅವರಿಗೆ ಬರೋಬ್ಬರಿ 500 ಕೆಜಿ ತೂಕದ ಸೇಬಿನ ಹಾರ ಹಾಕಿ ಅಭಿಮಾನ ಮೆರೆದರು. ಇದನ್ನೂ ಓದಿ:ಚಿಕ್ಕಬಳ್ಳಾಪುರದಲ್ಲಿ ವೋಟ್ಗಾಗಿ ಮಾತ್ರವಲ್ಲ ಸೇಬಿಗಾಗಿಯೂ ಫೈಟೋ ಫೈಟು
ರಾತ್ರಿ ವೇಳೆಯಲ್ಲೂ ಸಿದ್ದರಾಮಯ್ಯ ಅವರು ಬಿರುಸಿನ ಪ್ರಚಾರ ಮಾಡುತ್ತಿದ್ದು, ಅಭಿಮಾನಿಗಳು ಕ್ರೇನ್ ಮೂಲಕ ಸಿದ್ದರಾಮಯ್ಯ ಅವರಿಗೆ ಬೃಹತ್ ಸೇಬಿನ ಹಾರ ಹಾಕಿ, ಹೂ ಮಳೆಗೈದು ಅದ್ಧೂರಿಯಾಗಿ ಸ್ವಾಗತಿಸಿದರು. ಅಭಿಮಾನಿಗಳ ಪ್ರೀತಿ, ಬೆಂಬಲ ನೋಡಿ ಸಿದ್ದರಾಮಯ್ಯ ಅವರು ಕೂಡ ಸಂತೋಷಪಟ್ಟರು.