ಮಂಡ್ಯ: ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ಮಡಿಲಿಗೆ ಪುರಸಭಾ ಸದಸ್ಯರಿಬ್ಬರು ಚುನಾವಣಾ ಖರ್ಚಿಗೆಂದು ತಲಾ 5,000 ಹಣವನ್ನು ದಾನ ಮಾಡಿದ್ದಾರೆ.
ಸುಮಲತಾ ಮದ್ದೂರಿನ ಶಿವಪುರದ ಪ್ರಮುಖ ಬೀದಿಗಳಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಗ್ರಾಮಸ್ಥರು ಹೂ ಎರಚಿ ಸುಮಲತಾಗೆ ಸ್ವಾಗತ ನೀಡಿದ್ದಾರೆ. ಈ ವೇಳೆ ಪುರಸಭಾ ಸದಸ್ಯ ರಾಮು ಹಾಗು ಕಾಂಗ್ರೆಸ್ ಪುರಸಭಾ ಸದಸ್ಯ ನಂದೀಶ್ ಚುನಾವಣಾ ಖರ್ಚಿಗೆಂದು ಸುಮಲತಾ ಅವರ ಮಡಿಲಿಗೆ ಎಲೆ ಅಡಿಕೆ ಜೊತೆ 5,000 ರೂ. ದಾನ ಮಾಡಿದ್ದಾರೆ.
ಕಾಂಗ್ರೆಸ್ ರಾಜ್ಯ ನಾಯಕರು ಈಗಾಗಲೇ ಸುಮಲತಾ ಅವರ ಪ್ರಚಾರಕ್ಕೆ ಹೋಗಬಾರದು ಎಂದು ಎಚ್ಚರಿಕೆ ನೀಡಿದ್ದಾರೆ. ಎಚ್ಚರಿಕೆ ನೀಡಿದರೂ ಸಹ ಪುರಸಭೆ ಸದಸ್ಯ ನಂದೀಶ್, ಸುಮಲತಾ ಅವರಿಗೆ 5000 ರೂ. ನೀಡಿದ್ದಾರೆ. ಸುಮಲತಾ ಅವರು ಪ್ರಚಾರ ಮಾಡುವ ಸಂದರ್ಭದಲ್ಲಿ ಕಾಂಗ್ರೆಸ್ ಬಾವುಟಗಳನ್ನು ಪ್ರದರ್ಶಿಸಿಕೊಳ್ಳುತ್ತಿದ್ದಾರೆ. ಇದು ನೀತಿ ಸಂಹಿತೆ ಉಲ್ಲಂಘನೆ ಆಗುತ್ತೆ ಎಂದು ಮಂಡ್ಯ ಜಿಲ್ಲಾಧ್ಯಕ್ಷರು ದೂರು ನೀಡಿದ್ದರು. ಆದರೆ ಇಂದು ಸುಮಲತಾ ಪ್ರಚಾರದ ವೇಳೆ ಎಲ್ಲಿಯೂ ಕಾಂಗ್ರೆಸ್ ಬಾವುಟಗಳು ಕಾಣಿಸಲಿಲ್ಲ. ಆದರೆ ಕಾಂಗ್ರೆಸ್ ಮುಖಂಡರು ಪ್ರಚಾರದಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಬಗ್ಗೆ ಮಾತನಾಡಿದ ಸುಮಲತಾ ಅವರು, ನಿಮ್ಮೆಲ್ಲರ ಪ್ರೀತಿಯಲ್ಲಿ ಅಂಬರೀಶಣ್ಣ ಇಲ್ಲಿಯೇ ಉಳ್ಕೊಂಡಿದ್ದಾರೆ ಎನ್ನುವ ಭಾವನೆ ನನಗೆ ಮೂಡುತ್ತಿದೆ. ನಾನು ನಿಮ್ಮ ಸಮಸ್ಯೆ, ನೋವಿಗೆ ಸ್ಪಂದಿಸ್ತೀನಿ. ನಿಮ್ಮ ನೋವು ಸಂಕಷ್ಟಗಳನ್ನು ನನ್ನ ಬಳಿ ತೋಡಿಕೊಳ್ಳಬಹುದು. ಹಾಗೆಯೇ ನನ್ನ ಬಗ್ಗೆ ಏನೇನ್ ಮಾತಾಡಿದರೂ, ಏನೆಲ್ಲಾ ನೋವು ಕೊಟ್ಟರು ಎಂದು ನಿಮಗೆ ಅರ್ಥವಾದರೆ ಸಾಕು. ಏ. 18ರಂದು ನೀವು ಇದಕ್ಕೆಲ್ಲಾ ಉತ್ತರ ಕೊಡಬೇಕು ಎಂದರು.
ನನ್ನ ಬಗ್ಗೆ ಅವರು ಏನೆಂದರೂ ನಾನು ಸಹಿಸಿಕೊಳ್ಳುತ್ತೀನಿ. ಆದರೆ ಕುತಂತ್ರ ಮೋಸ ಮಾಡುವುದಕ್ಕೆ ಸುಮಲತಾ ಎಂಬ ಹೆಸರಿನ ಮೂವರನ್ನು ಹಾಕಿದ್ದಾರೆ. ಹಾಗಾಗಿ ನೀವು ಮಂಡ್ಯದ ಸ್ವಾಭಿಮಾನದ ಕಹಳೆಯ ಚಿಹ್ನೆಗೆ ಮತ ಹಾಕಿ. ನನ್ನ ನಂಬಿ ನನ್ನ ನೋವಿನಲ್ಲಿ ಜೊತೆಯಾಗಿದ್ದೀರಿ. ನಿಮ್ಮ ನೋವಲ್ಲಿ ನಾನು ಇರುತ್ತೀನಿ. ನನ್ನ ಕೈ ಬಿಡಬೇಡಿ ಎಂದು ಮದ್ದೂರಿನ ಶಿವಪುರದಲ್ಲಿ ಸುಮಲತಾ ಮನವಿ ಮಾಡಿಕೊಂಡಿದ್ದಾರೆ.