– ಸರ್ ಮನೆಯಲ್ಲಿಲ್ಲ ಎಂದು ಸಿಹಿಕೊಟ್ಟು ಕಳುಹಿಸಿದ ದೊಡ್ಮನೆ ಸದಸ್ಯ
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರು ರಾಜ್ಯದಲ್ಲಿ ಹರಡುತ್ತಿರುವ ಕೊರೊನಾದಿಂದಾಗಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದರು. ಹೀಗಿದ್ದರು ಪುನೀತ್ ಅವರ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ನೋಡಲು ದೊಡ್ಮನೆ ಮುಂದೆ ಧಾವಿಸಿದ್ದಾರೆ.
ಎರಡು ದಿನಗಳ ಹಿಂದೆ ಪುನೀತ್ ತಮ್ಮ ಟ್ವಿಟ್ಟರಿನಲ್ಲಿ ವಿಡಿಯೋವೊಂದನ್ನು ಟ್ವೀಟ್ ಮಾಡಿದ್ದರು. ಅದರಲ್ಲಿ, ನಾನು ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ತಮ್ಮ ತಮ್ಮ ಊರುಗಳಿಂದ ಯಾರು ಮನೆಯ ಹತ್ತಿರ ಬರಬೇಡಿ. ನಾನು ಮನೆಯ ಬಳಿಯೂ ಇರಲ್ಲ ಎಂದು ಹೇಳಿದ್ದರು.
ಪುನೀತ್ ಅವರ ಮನವಿಗೆ ಲಕ್ಷಾಂತರ ಅಭಿಮಾನಿಗಳು ಸ್ಪಂದಿಸಿದ್ದಾರೆ. ಆದರೆ ಬೆರಳೆಣಿಕೆಯಷ್ಟು ಅಭಿಮಾನಿಗಳು ಇದೀಗ ದೊಡ್ಮನೆ ಬಳಿ ಬಂದಿದ್ದಾರೆ. ಕೊರೊನಾ ಭಯ ಬಿಟ್ಟು ಪುನೀತ್ ಅವರನ್ನು ನೋಡಬೇಕು, ಶುಭ ಕೋರಬೇಕು ಎಂದು ಪವರ್ ಸ್ಟಾರ್ ನಿವಾಸ ಸದಾಶಿವನಗರಕ್ಕೆ ಧಾವಿಸಿದ್ದಾರೆ.
ಈ ವೇಳೆ ದೊಡ್ಮನೆ ಸದಸ್ಯರು, ಪುನೀತ್ ಸರ್ ಮನೆಯಲ್ಲಿಲ್ಲ ಎಂದು ಹೇಳಿ ಮನೆವರೆಗೂ ಬಂದಂತಹ ಅಭಿಮಾನಿಗಳಿಗೆ ಮೈಸೂರು ಪಾಕ್ ಕೊಟ್ಟು ಕಳುಹಿಸಿದ್ದಾರೆ. ಅಲ್ಲದೆ ಪುನೀತ್ ಸರ್ ಮುಂದಿನ ವಾರ ಸಿಗುತ್ತಾರೆ. ಈಗ ಮನೆಗೆ ಹೋಗಿ ಎಂದು ಹೇಳಿ ಕಳುಹಿಸಿದ್ದಾರೆ.