ಬೆಂಗಳೂರು: ಸ್ಯಾಂಡಲ್ವುಡ್ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ( Puneeth Rajkumar) ಅವರ ಕೊನೆಯ ಚಿತ್ರ ಗಂಧದಗುಡಿ (Gandhagudi) ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ನಾಡು, ನುಡಿ ಉಳಿವಿನ ವಿಚಾರವಾಗಿ ಬರುತ್ತಿರುವ ಈ ಚಿತ್ರಕ್ಕೆ ಸದ್ಯ ಟ್ಯಾಕ್ಸ್ ಫ್ರೀ ಮಾಡುವಂತೆ ಅಭಿಮಾನಿಗಳು ಸರ್ಕಾರಕ್ಕೆ ಒತ್ತಾಯಿಸುತ್ತಿದ್ದಾರೆ.
ಕರ್ನಾಟಕ ರತ್ನ ಡಾ. ಪುನೀತ್ ರಾಜ್ಕುಮಾರ್ ಅವರ ಕನಸಿನ ಕೂಸು ಗಂಧದಗುಡಿ ಚಿತ್ರ ಇದೇ ತಿಂಗಳ 28ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಇದು ಅಪ್ಪು ಅವರ ಕೊನೆಯ ಚಿತ್ರ ಆಗಿರುವ ಕಾರಣ ಸಿನಿಮಾದ ಕ್ರೇಜ್ ಹಾಗೂ ಸೆಲೆಬ್ರೇಷನ್ ರೇಂಜು ಎರಡೂ ಬೇರೆಯದ್ದೇ ಮಟ್ಟದಲ್ಲಿರಲಿದೆ ಎನ್ನುವುದು ಖಚಿತ. ಈಗಾಗಲೇ ಪರಮಾತ್ಮನನ್ನು ಕಣ್ತುಂಬಿಕೊಳ್ಳುವುದಕ್ಕೆ ಇಡೀ ದೇಶವೇ ಕಾದುಕುಳಿತಿದೆ. ಈ ನಡುವೆ ಸರ್ಕಾರಕ್ಕೆ ಅಪ್ಪು ಅಭಿಮಾನಿಗಳು ಮನವಿವೊಂದನ್ನು ಸಲ್ಲಿಸಲು ತಯಾರಿ ನಡೆಸಿದ್ದಾರೆ. ಇದನ್ನೂ ಓದಿ: ‘ಗಂಧದ ಗುಡಿ’ ಪ್ರಿ ರಿಲೀಸ್ ಇವೆಂಟ್ : ಅಮಿತಾಭ್, ರಜನಿ ಸೇರಿ ಗಣ್ಯರಿಗೆ ಆಹ್ವಾನ
ಹೌದು ಅರಣ್ಯ ಸಂಪತ್ತು, ಪ್ರಾಣಿ ಪಕ್ಷಿ ಸಂಕುಲ ಉಳಿಸುವ ನಿಟ್ಟಿನಲ್ಲಿ ಶುರುವಾದ ಚಿತ್ರ ಗಂಧದಗುಡಿ. ನಾಡು, ನುಡಿ ವಿಚಾರವಾಗಿ ಬರುತ್ತಿರುವ ಈ ಚಿತ್ರಕ್ಕೆ ಯಾವುದೇ ತೆರಿಗೆ ವಿಧಿಸದೇ ವಿನಾಯಿತಿ ನೀಡುವಂತೆ ಅಭಿಮಾನಿಗಳು ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರೆ. ಈ ಹಿಂದೆ ಬಿಡುಗಡೆಯಾದ ದಿ ಕಾಶ್ಮೀರ್ ಫೈಲ್ಸ್ (The kashmir Files) ಚಿತ್ರಕ್ಕೆ ತೆರಿಗೆ ವಿನಾಯಿತಿ ಕೊಟ್ರಿ. ಈಗ ನಮ್ಮದೇ ಭಾಷೆಯ ಚಿತ್ರ ಸಮಾಜಕ್ಕೆ ಸಂದೇಶ ಸಾರುತ್ತಿದೆ. ಜೊತೆಗೆ ಪುನೀತ್ ರಾಜ್ಕುಮಾರ್ ಅವರ ಕೊನೆಯ ಚಿತ್ರ. ಈ ಕಾರಣಕ್ಕಾಗಿ ತೆರಿಗೆ ವಿನಾಯಿತಿ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಕೆಲ ಕ್ಯಾಂಪೇನ್ಗಳಿಗೂ ಅಪ್ಪು ಅಭಿಮಾನಿಗಳು ಪ್ಲ್ಯಾನ್ ಮಾಡಿದ್ದಾರೆ. ಟ್ವಿಟ್ಟರ್ ಅಭಿಯಾನದ ಜೊತೆಗೆ ವಿವಿಧ ಸೆಲೆಬ್ರಿಟಿಗಳ ಮೂಲಕ ಸರ್ಕಾರದ ಮಟ್ಟದಲ್ಲಿ ವಿಷಯವನ್ನು ಚರ್ಚೆಗೆ ತರಲು ಸಿದ್ಧತೆ ನಡೆಸಿದ್ದು, ಎರಡ್ಮೂರು ದಿನಗಳಲ್ಲಿ ರಾಜ್ಯಾದ್ಯಂತ ಗಂಧದಗುಡಿ ಚಿತ್ರಕ್ಕೆ ಟ್ಯಾಕ್ಸ್ ಫ್ರೀ ಮಾಡುವಂತೆ ಅಭಿಯಾನ ಆರಂಭವಾಗಲಿದೆ.
ಒಟ್ಟಾರೆ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಕೊನೆಯ ಚಿತ್ರಕ್ಕೆ ಟ್ಯಾಕ್ಸ್ ಫ್ರೀ ಮಾಡುವಂತೆ ಅಭಿಮಾನಿಗಳು ಸರ್ಕಾರಕ್ಕೆ ಒತ್ತಾಯಿಸುತ್ತಿರುವುದು ಒಳ್ಳೇಯ ಸುದ್ದಿಯೇ, ಆದರೆ ಈ ಬಗ್ಗೆ ಸರ್ಕಾರ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂಬುವುದನ್ನು ಕಾದು ನೋಡಬೇಕಿದೆ. ಇದನ್ನೂ ಓದಿ: ಮುಂದಿನ ವರ್ಷ ಹಸೆಮಣೆ ಏರಲಿದ್ದಾರೆ ಸಿದ್ಧಾರ್ಥ್-ಕಿಯಾರಾ