ಮಂಡ್ಯ: ಸಿಎಂ ಹೆಚ್.ಡಿ.ಕುಮಾರಸ್ವಾಮಿ ಗುರುವಾರ ರಾತ್ರಿವರೆಗೂ ಪುತ್ರ ನಿಖಿಲ್ ಪರ ಮಳವಳ್ಳಿ ತಾಲೂಕಲ್ಲಿ ಪ್ರಚಾರ ನಡೆಸಿದರು. ಈ ವೇಳೆ ಅಭಿಮಾನಿಯೊಬ್ಬ ಸಿಎಂಗೆ ಮುತ್ತು ನೀಡಿದ. ಆದರೂ ಸುಮ್ಮನಾಗದ ಅಭಿಮಾನಿ ಸಿಎಂ ಹೆಗಲಲ್ಲಿದ್ದ ಟವಲ್ನ್ನು ತೆಗೆದು ಒಂದೇ ಸಮನೇ ಸಿಹಿಮುತ್ತು ನೀಡಿದರು. ಈ ಮೊದಲು ಸುಮಲತಾ ಅಂಬರೀಶ್ ಪ್ರಚಾರ ಮಾಡುತ್ತಿದ್ದ ವೇಳೆ ಅಭಿಮಾನಿಯೋರ್ವ ನಟ ದರ್ಶನ್ ಗೆ ಸಿಹಿ ಮುತ್ತು ನೀಡಿದ್ದರು.
ಇದಕ್ಕೂ ಮೊದಲು ಮದ್ದೂರಿನಲ್ಲಿ ಮಾತನಾಡಿದ ಸಿಎಂ. ನಿಖಿಲ್ ಗೆಲ್ಲಿಸಲು ಮಂಡ್ಯದಲ್ಲಿ ಅಭಿವೃದ್ಧಿಗೆ ಚಾಲನೆ ಕೊಟ್ಟಿಲ್ಲ. ನನಗೆ ಕುತಂತ್ರದ ರಾಜಕಾರಣ ಮಾಡಿ ಅಭ್ಯಾಸವಿಲ್ಲ. ನಮ್ಮ ಎದುರಾಳಿಗಳು ಅವರ ಕೆಲಸಗಾರರಿಗೆ ಸೈಟು, ಹಣ ಕೊಡುತ್ತೇವೆ ಎಂದು ಮಾತನಾಡುವುದನ್ನು ಕೇಳಿದ್ದೇನೆ. ಒಂದು ಮುಖ ನೋಡಿದ್ದೀರಿ, ಇನ್ನೊಂದು ಮುಖ ತೋರಿಸುತ್ತೇವೆ ಎಂದು ಹೇಳುವುದನ್ನು ಗಮನಿಸಿದ್ದೇನೆ. ಅವರು ಬಂದಾಗ ತಾಯಂದಿರು ಕೇಳಿ. ಅದೇನು ಇನ್ನೊಂದು ಮುಖ ತೋರಿಸುತ್ತೇನರ ಅಂದ್ರಲ್ಲ ತೋರಿಸಿ ಎಂದು ಕೇಳಿ ಹೇಳುವ ಮೂಲಕ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಕಾಲೆಳೆದರು.
ನಮ್ಮ ವಿರೋಧಿ ಅಭ್ಯರ್ಥಿ ನಾಮಪತ್ರ ಸಲ್ಲಿಸಿದ ದಿನದಿಂದ ಇಂದಿನವರೆಗೂ ಕಾಟ ಕೊಟ್ಟಿದ್ದಾರೆ. ಈಗ ಜಿಲ್ಲೆಯ ಜನರ ತೀರ್ಮಾನ ಅರಿತು ಅವರ ಬರಂಬಲಿಗರ ಮೇಲೆ ಅವರೇ ಕಲ್ಲು ತೂರಾಟ ನಡೆಸಿ, ಕುಮಾರಣ್ಣನ ಕಡೆಯವರು ಹೊಡೆದರು ಎಂದು ಅನುಕಂಪ ಗಿಟ್ಟಿಸಲು ಪ್ಲಾನ್ ಮಾಡಿದ್ದಾರೆ. ಅದಕ್ಕೆ ಅವಕಾಶ ಮಾಡಿಕೊಡಬೇಡಿ ಎಂದು ಸಿಎಂ ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡರು.
ನಾನು ರಾಜಕೀಯಕ್ಕೆ ಬಂದಿದ್ದು ಆಕಸ್ಮಿಕ, ಆಗ ನೀವು ನನಗೆ ಆಶೀರ್ವಾದ ಮಾಡಿದ್ರಿ. ಇಂದು ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡಿದ್ದಾರೆ. ನನಗೆ ಅವಕಾಶ ಕೊಟ್ಟ ರೀತಿ, ಅವನಿಗೂ ಅವಕಾಶ ಕೊಡಿ. ಈಗ ಮಂಡ್ಯ ಜಿಲ್ಲೆಯ ರೈತರ ಬಗ್ಗೆ ಮಾತನಾಡುವವರು ಯಾರಾದ್ರು ಮನೆಗೆ ಬಂದು ಸಾಂತ್ವನ ಹೇಳಿದ್ದಾರ ಯೋಚನೆ ಮಾಡಿ. ನಾನು ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ತೊಂದರೆ ಕೊಟ್ಟಿಲ್ಲ. ಯಾರೇ ಬಂದು ಸಮಸ್ಯೆ ಹೇಳಿಕೊಂಡ್ರು ಸ್ಪಂದಿಸಿದ್ದೇನೆ. ನೀವು ಸತ್ತರೆ ನಾವು ಬರಬೇಕು. ನಾವು ಸತ್ತರೆ ನೀವು ಬರಬೇಕು. ಚುನಾವಣೆ ಮುಗಿದ ನಂತರ ಅವರು ನಿಮ್ಮ ಕೈಗೆ ಸಿಗಲ್ಲ. ನನ್ನ ಸ್ನೇಹಿತ ಅಂಬರೀಶ್ ಬದುಕಿದ್ದಾಗಲೇ ನಿಮ್ಮ ಕಷ್ಟಕ್ಕೆ ಸ್ಪಂದಿಸದ ಅಭ್ಯರ್ಥಿ ಈಗ ನಿಮ್ಮ ಕಷ್ಟಕ್ಕೆ ಸ್ಪಂದಿಸುತ್ತಾರಾ ಎಂದು ಸುಮಲತಾ ವಿರುದ್ಧ ಸಿಎಂ ವಾಗ್ದಾಳಿ ನಡೆಸಿದರು.