ಶಂಕರಾಭರಣಂ ಸೇರಿದಂತೆ ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿರುವ ತೆಲುಗಿನ (Telugu) ಹೆಸರಾಂತ ನಿರ್ದೇಶಕ ಕೆ.ವಿಶ್ವನಾಥ್ (K. Vishwanath) ಪತ್ನಿ ಕೆ.ಜಯಲಕ್ಷ್ಮಿ (Jayalakshmi) ನಿಧನರಾಗಿದ್ದಾರೆ (Passed Away). ಕೆ.ವಿಶ್ವನಾಥ್ ವಿಧಿವಶರಾಗಿ 24 ದಿನಗಳ ನಂತರ ಪತ್ನಿಯೂ ನಿಧನರಾಗಿದ್ದಾರೆ. ಹಾಗಾಗಿ ವಿಶ್ವನಾಥ್ ಕುಟುಂಬಕ್ಕೆ ಎರಡೆರಡು ಆಘಾತ ಎದುರಿಸಬೇಕಾಗಿದೆ. ಜಯಲಕ್ಷ್ಮಿಗೆ 88 ವರ್ಷ. ವಯೋಸಹಜ ಕಾಯಿಲೆಗಳಿಂದ ಅವರು ಬಳಲುತ್ತಿದ್ದರು ಎಂದು ಹೇಳಲಾಗುತ್ತಿದೆ.
ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಗ್ರಾಮವೊಂದರಲ್ಲಿ ಹುಟ್ಟಿದ್ದ ಜಯಲಕ್ಷ್ಮಿ, 22ನೇ ವಯಸ್ಸಿನಲ್ಲಿ ವಿಶ್ವನಾಥ್ ಅವರ ಜೊತೆ ಸಪ್ತಪದಿ ತುಳಿದಿದ್ದರು. 60ಕ್ಕೂ ಹೆಚ್ಚು ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದ್ದಾರೆ. ಪತಿಯ ನಿಧನಾನಂತರ ಅವರ ಆರೋಗ್ಯ ಮತ್ತಷ್ಟು ಹದೆಗೆಟ್ಟಿತ್ತು ಎಂದು ಹೇಳಲಾಗುತ್ತಿದೆ. ಇಂದು ಹೈದರಾಬಾದ್ (Hyderabad) ನಲ್ಲಿರುವ ನಿವಾಸದಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.
ಸಾಗರ ಸಂಗಮಂ, ಸ್ವರ್ಣ ಕಮಲಂ ಚಿತ್ರಗಳನ್ನು ಪತಿಯು ನಿರ್ದೇಶನ ಮಾಡಿದಾಗ, ಸದಾ ಅವರ ಬೆಂಬಲವಾಗಿ ನಿಂತವರು ಜಯಲಕ್ಷ್ಮಿ. ಪತಿಯು ಸಿನಿಮಾ ರಂಗದಲ್ಲಿ ಬ್ಯುಸಿಯಾದಾಗ ಇಡೀ ಕುಟುಂಬವನ್ನು ನಿಭಾಯಿಸಿಕೊಂಡು ಹೋಗುತ್ತಿದ್ದರಂತೆ. ಪತಿಯ ಬೇಕು ಬೇಡಿಕೆಗಳಿಗೆ ಜಯಲಕ್ಷ್ಮಿ ಇರಲೇಬೇಕು ಎನ್ನುವಂತಹ ದಾಂಪತ್ಯ ಜೀವನ ಇವರದ್ದಾಗಿತ್ತು ಎನ್ನುತ್ತಾರೆ ಅವರ ಆಪ್ತರು.