ತೆಲುಗು (Telugu) ಸಿನಿಮಾ ರಂಗದ ಖ್ಯಾತ ಕೋರಿಯೊಗ್ರಾಫರ್ (Choreographer) ಚೈತನ್ಯ (Chaitanya) ಸಾಲಬಾಧೆ ತಾಳದೇ ಆತ್ಮಹತ್ಯೆಗೆ (Suicide) ಶರಣಾಗಿದ್ದಾರೆ. ಸಾಕಷ್ಟು ಸಾಲ ಮಾಡಿಕೊಂಡಿದ್ದ ಚೈತನ್ಯ ಅದನ್ನು ತೀರಿಸಲಾಗದೆ ಹಲವು ದಿನಗಳಿಂದ ಮನನೊಂದಿದ್ದರು ಎನ್ನಲಾಗುತ್ತಿದೆ. ಈ ಕುರಿತು ವಿಡಿಯೋವೊಂದನ್ನು ಮಾಡಿರುವ ಅವರು ಈ ಸಾವಿಗೆ ಸಾಲವೇ ಕಾರಣವೆಂದು ಹೇಳಿದ್ದಾರೆ.
ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ಅವರು ವಾಸವಿದ್ದು, ಸಾಯುವುದಕ್ಕೂ ಮುನ್ನ ವಿಡಿಯೋವೊಂದನ್ನು ಮಾಡಿದ್ದಾರೆ. ‘ನನ್ನ ತಂದೆ ತಾಯಿ ಹಾಗೂ ಸಹೋದರಿ ಚೆನ್ನಾಗಿ ನೋಡಿಕೊಂಡರು. ಆದರೆ, ನಾನು ಅನಿವಾರ್ಯ ಕಾರಣಗಳಿಂದಾಗಿ ಸಾಲ ಮಾಡಿಕೊಂಡೆ. ಅದನ್ನು ತೀರಿಸಲು ಕಷ್ಟವಾಯಿತು. ಹಾಗಾಗಿ ಆತ್ಮಹತ್ಯೆಯ ನಿರ್ಧಾರಕ್ಕೆ ಬಂದಿದ್ದೇನೆ. ನೆಲ್ಲೂರಿನಲ್ಲಿ ಇಂದು ನನ್ನ ಕೊನೆಯ ದಿನ’ ಎಂದು ವಿಡಿಯೋದಲ್ಲಿ ಹೇಳಿದ್ದಾರೆ. ಇದನ್ನು ಓದಿ:ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಕಿರೀಟಕ್ಕೆ ಮತ್ತೊಂದು ಗರಿ
ತೆಲುಗಿನ ಜನಪ್ರಿಯ ಡ್ಯಾನ್ಸ್ ಶೋ ‘ಧೀ’ ಮೂಲಕ ಸಾಕಷ್ಟು ಪ್ರಸಿದ್ಧಿ ಪಡೆದಿದ್ದ ಅವರು, ಪ್ರಭುದೇವ ಸೇರಿದಂತೆ ಹಲವರೊಂದಿಗೆ ಕೆಲಸ ಮಾಡಿದ್ದಾರೆ. ಅಲ್ಲದೇ, ಅನೇಕ ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿಯೂ ಕೆಲಸ ಮಾಡಿದ್ದಾರೆ. ಚೈತನ್ಯ ಸಾವಿಗೆ ಹಲವರು ಕಂಬನಿ ಮಿಡಿದಿದ್ದಾರೆ.